
Mangalore: 'ಬೇಟಿ ಬಚಾವೋ ಭೇಟಿ ಪಢಾವೋ' ಜಾಗೃತಿ ಜಾಥಾ ಅರಿವು ಕಾರ್ಯಕ್ರಮ, ಸನ್ಮಾನ
ಮೂಡುಬಿದಿರೆ: ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಗ್ರಾಮಾಂತರ ಇವುಗಳ ಆಶ್ರಯದಲ್ಲಿ 'ಬೇಟಿ ಬಚಾವೋ ಬೇಟಿ ಪಡಾವೋ' ಕಾರ್ಯಕ್ರಮದಡಿ ಜಾಗೃತಿ ಜಾಥಾ, ಅರಿವು ಕಾರ್ಯಕ್ರಮ ಹಾಗೂ ಸಾಧನೆ ಮಾಡಿದ ಹೆಣ್ಣು ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಸಮಾಜ ಮಂದಿರದಲ್ಲಿ ನಡೆಯಿತು.
ಮೂಡುಬಿದಿರೆ ತಾಲೂಕು ಉಪ ತಹಶೀಲ್ದಾರ್ ರಾಮ್ ಅವರು ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ನೋಟರಿ ವಕೀಲೆ ಶ್ವೇತಾ ಜೈನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾನೂನು ದುರ್ಬಳಕೆ, ಕೌಟುಂಬಿಕ ಸಮಸ್ಯೆ ಹಾಗೂ ಹೆಣ್ಣು ಮಕ್ಕಳ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು.
ಸಾಧಕರಿಗೆ ಸನ್ಮಾನ:
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿರುವ ಎಕ್ಸಲೆಂಟ್ ಕಾಲೇಜಿನ ನಮೃತಾ ಕೆ.(622ಅಂಕ), ಆಳ್ವಾಸ್ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಸ್ಪಂದನಾ ಎಂ.ಎಂ.(622 ಅಂಕ) ಹಾಗೂ ಕ್ರೀಡೆಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿರುವ ಆಳ್ವಾಸ್ ನ ಗೋಪಿಕಾ ಅವರನ್ನು ಸನ್ಮಾನಿಸಲಾಯಿತು.
'ಬೇಟಿ ಬಚಾವೋ ಬೇಟಿ ಪಢಾವೋ' ಕಾರ್ಯಕ್ರಮದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಳಿಯೂರು ಪ.ಪೂ. ಕಾಲೇಜು ಮತ್ತು ಪ್ರೌಢಶಾಲೆಯ 9 ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಉಪ ತಹಶೀಲ್ದಾರ್ ತಿಲಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಿಗಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಕೆ., ಸಿ.ಆರ್.ಪಿ. ನಾಗರತ್ನ, ಮಹೇಶ್ವರಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೇಲ್ವಿಚಾರಕಿ ಶುಭ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಕಾತ್ಯಾಯಿನಿ ಕಾರ್ಯಕ್ರಮ ನಿರೂಪಿಸಿ, ಮೇಲ್ವಿಚಾರಕಿ ರತಿ ಶೆಟ್ಟಿ ವಂದಿಸಿದರು.
ಇದಕ್ಕೂ ಮೊದಲು ಸಮಾಜ ಮಂದಿರದ ಆವರಣದಿಂದ ಹೊರಟ ಜಾಗೃತಿ ಜಾಥಾಕ್ಕೆ ಉಪ ತಹಶೀಲ್ದಾರ್ ರಾಮ್ ಚಾಲನೆಯನ್ನು ನೀಡಿದರು. ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.
ಜಾಥಾವು ಮೂಡುಬಿದಿರೆ ಪೇಟೆಯ ಮೂಲಕ ಮಸೀದಿ ರಸ್ತೆಯಲ್ಲಿ ಮೂಲಕ ಸಾಗಿ ಮತ್ತೆ ಸಮಾಜ ಮಂದಿರಕ್ಕೆ ಸಾಗಿ ಬಂತು.