Dharmastala: ಕೊಡಗು ವಿವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಕೆ.ಎನ್. ಜನಾರ್ಧನರವರ ನೇಮಕ-ಸಿರಿ ಸಂಸ್ಥೆಯಲ್ಲಿ ವಿಶೇಷ ಅಭಿನಂದನಾ ಕಾರ್ಯಕ್ರಮ
ಉಜಿರೆ: ಕೊಡಗು ವಿಶ್ವವಿದ್ಯಾನಿಲಯದ ಸಿಂಡಿಕೆಟ್ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ ಅವರಿಗೆ ‘ವಿಶೇಷ ಅಭಿನಂದನಾ ಕಾರ್ಯಕ್ರಮ’ ಮಾ.14 ರಂದು ಸಿರಿ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಚಲನಚಿತ್ರ ನಟ ಹಾಗೂ ಸಿರಿ ಬ್ರ್ಯಾಂಡ್ ರಾಯಭಾರಿಯೂ ಆಗಿರುವ ರಮೇಶ್ ಅರವಿಂದ್ ಅವರು ಸಿರಿ ಎಂಡಿ ಜನಾರ್ಧನರವರನ್ನು ಪ್ರೀತಿಪೂರ್ವಕವಾಗಿ ಅಭಿನಂದಿಸಿ, ಗೌರವಾರ್ಪಣೆ ಸಲ್ಲಿಸಿದರು.
ನಂತರ ಅವರು ಮಾತನಾಡಿ, ಹೆಗ್ಗಡೆ ಅವರ ಆದರ್ಶ ತತ್ವವನ್ನು ಮೈಗೂಡಿಸಿಕೊಂಡಿರುವಂತಹ ಜನಾರ್ಧನ ಅವರು ಸದಾ ಕ್ರಿಯಾಶೀಲರಾಗಿದ್ದು, ಯಾವುದೇ ವ್ಯಕ್ತಿ ಇವರಲ್ಲಿ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಂತಹ ಸಂದರ್ಭದಲ್ಲಿ ಕಿಂಚಿತ್ತೂ ಹಿಂಜರಿಯದೇ ತಮ್ಮ ಸಹಾಯಹಸ್ತವನ್ನು ಚಾಚುವ ಮೂಲಕ ಔದಾರ್ಯವನ್ನು ಮೆರೆದಿದ್ದಾರೆ. ಇಂತಹ ಸಜ್ಜನಿಕೆ, ಸಹೃದಯವನ್ನು ಹೊಂದಿರುವ ವ್ಯಕ್ತಿ ಸಿರಿ ಸಂಸ್ಥೆಯ ಎಂಡಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಸದಾ ಸಿರಿ ಸಂಸ್ಥೆಯ ಉನ್ನತಿಗಾಗಿ ಹಗಳಿರುಳು ಶ್ರಮಿಸುತ್ತಾ, ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವಂತಹ ಸಿರಿ ಎಂಡಿಯವರೊಂದಿಗೆ ನಾವು, ನೀವೇಲ್ಲರೂ ಕೈಜೋಡಿಸಿ ರಾಜ್ಯದಾದ್ಯಂತ ಪ್ರಸಿದ್ಧಿ ಗಳಿಸಿರುವ ನಮ್ಮ ಸಿರಿ ಬ್ರ್ಯಾಂಡನ್ನು ಇಡೀ ಭಾರತ ದೇಶದಾದ್ಯಂತ ಸೂಪರ್ ಬ್ರ್ಯಾಂಡ್ ಆಗಿ ಎತ್ತಿ ಹಿಡಿಯುವಲ್ಲಿ ನಾವೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸೋಣ ಎಂದು ಎಲ್ಲಾ ಸಿರಿ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.
ಕೊಡಗು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ. ಅಶೋಕ್ ಆಲೂರು ಮತ್ತು ಡಾಕ್ಟರೇಟ್ ಪದವಿ ಪುರಸ್ಕೃತೆ ಡಾ. ರೂಪಾ ಅಶೋಕ್ ಆಲೂರು ದಂಪತಿಗಳು ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು, ಸಿರಿ ಎಂಡಿ ಕೆ.ಎನ್. ಜನಾರ್ಧನ ಅವರ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಮತ್ತು ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಧಿಸಿರುವಂತಹ ಅನೇಕ ಸಾಧನೆಗಳು ಹಾಗೂ ಪೂಜ್ಯರ ಮಾರ್ಗದರ್ಶನದಲ್ಲಿ ಅವರು ನಿರ್ವಹಿಸಿರುವಂತಹ ಸಮಾಜಮುಖಿ ಕೆಲಸಕಾರ್ಯಗಳ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿ, ಕೊಡಗು ವಿವಿ ಸೆನೆಟ್ ಸದಸ್ಯರಾಗಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಇವರಿಂದ ಇನ್ನಷ್ಟು ಜನಪರ ಕಾರ್ಯಗಳು ನೆರವೇರುವಂತಾಗಲಿ ಎಂದು ಹಾರೈಸಿ, ಗೌರವಾರ್ಪಣೆ ಸಲ್ಲಿಸಿದರು.
ಸಿರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ರಾಜೇಶ್ ಪೈ, ಶ್ರೀ ಧ.ಮಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ ಮೋಗರಾಜ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಿರಿ ಎಂ.ಡಿಯವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಬಾಲ್ಯದಿಂದ ಬಡತನದಲ್ಲಿಯೇ ತಾನು ಬೆಳೆದು ಬಂದ ದಿನಗಳನ್ನು ನೆನಪಿಸಿಕೊಂಡು, ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಆಶೀರ್ವಾದ ಹಾಗೂ ಅವರ ಮಾರ್ಗದರ್ಶನದಲ್ಲಿ ಸಿರಿ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಜೊತೆಗೆ ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸೇವೆಗೈಯ್ಯುವ ಸದಾವಕಾಶ ದೊರೆತಿರುವುದು ನನ್ನ ಸೌಭಾಗ್ಯ. ಸಿರಿ ಸಿಬ್ಬಂದಿಗಳೆಲ್ಲರೂ ಪ್ರಾಮಾಣಿಕತೆಯಿಂದ ಶ್ರಮವಹಿಸಿ ದುಡಿಯುವ ಮೂಲಕ ಸಂಸ್ಥೆಯು ಯಶಸ್ವಿಯಾಗಿ ನಡೆದು ಹೆಗ್ಗಡೆ ಅವರ ಕನಸಾಗಿರುವ ಸಿರಿ ಸಂಸ್ಥೆಯನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿಹಿಡಿಯುವಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ರಮೇಶ್ ಅರವಿಂದ್, ಕೊಡಗು ವಿವಿ ಉಪಕುಲಪತಿ ಅಶೋಕ್ ಆಲೂರು ಮತ್ತು ಡಾ| ರೂಪಾ ಅಶೋಕ್ ಆಲೂರು ದಂಪತಿಯನ್ನು ಸಿರಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಸನ್ನ ಸ್ವಾಗತಿಸಿ, ಗೋದಾಮು ಪ್ರಬಂಧಕ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಸಲಹೆ ಅಧಿಕಾರಿ ಗಣೇಶ್ ಪ್ರಸಾದ್ ಎಸ್. ಕಾಮತ್ ವಂದಿಸಿದರು.



