Mangalore: ಅವಕಾಶ ವಂಚಿತರ ಪ್ರೋತ್ಸಾಹಕ್ಕೆ ಆಚರಣೆ ಅಗತ್ಯ

Mangalore: ಅವಕಾಶ ವಂಚಿತರ ಪ್ರೋತ್ಸಾಹಕ್ಕೆ ಆಚರಣೆ ಅಗತ್ಯ


ಮಂಗಳೂರು: ಸಮಾಜದಲ್ಲಿ ಅವಕಾಶ ವಂಚಿತ ಮಹಿಳೆಯರ ಪ್ರೋತ್ಸಾಹಕ್ಕಾಗಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡುವ ಅಗತ್ಯವಿದೆ. ಅಲ್ಲದೇ, ಪ್ರತಿ ಮಹಿಳೆಯೂ ತನ್ನನ್ನು ತಾನೇ ಪ್ರೋತ್ಸಾಹಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಯೆನಪೋಯಾ ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ರೇಖಾ ಸಲಹೆ ನೀಡಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಮಹಿಳಾ ವೇದಿಕೆ, ಮಹಿಳಾ ಘಟಕ, ಸ್ಪರ್ಶ್ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಜಗತ್ತು ಮಹಿಳೆ ಮತ್ತು ಪುರುಷ ಇಬ್ಬರನ್ನು ಗುರುತಿಸುತ್ತದೆ. ಆದರೆ ಅಸುರಕ್ಷಿತತೆ, ಪೂರ್ವಾಗ್ರಹ, ಸಮಾಜದ ಬಗೆಗಿನ ಭಯಗಳಿಂದಾಗಿ ಮಹಿಳೆಯರು ಮುಖ್ಯವಾಹಿನಿಗೆ ಬರಲು ಹಿಂದೇಟು ಹಾಕುತ್ತಾರೆ. ಪ್ರತಿ ಮಹಿಳೆ ತನ್ನ ಆತ್ಮಶಕ್ತಿಯನ್ನು ಅರಿತಾಗಲೇ ಮಹತ್ತರವಾದುದನ್ನು ಸಾಧಿಸಲು ಸಾಧ್ಯ. ಕೆಲಸದ ಸ್ಥಳಗಳಲ್ಲಿ ಭಾವನಾತ್ಮಕ ಶಾಂತತೆಯನ್ನು ಕಾಯ್ದುಕೊಂಡು, ತಾನೊಬ್ಬ ಅಬಲೆ ಎಂಬ ಭಾವನೆಯಿಂದ ಹೊರಬಂದು ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಒಂದು ಶಕ್ತಿಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಹಾಗೂ ಹಿರಿಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗ್ಗಡೆ, ಮಹಿಳೆ ತನ್ನಷ್ಟಕ್ಕೆ ತಾನು ಸಂತೋಷವಾಗಿರುವ ಹಾಗೆ ನೋಡಿಕೊಳ್ಳಬೇಕು. ಮಹಿಳೆ, ಪುರುಷ ಎಂಬ ಬೇಧಭಾವ ಮಾಡದೇ, ತನ್ನ ಪಾಲಿನ ಕರ್ತವ್ಯವೆಂದು ಭಾವಿಸಿ ಬದುಕು ಸವೆಸಿದಾಗ ಆಕೆ ಮನಸ್ಸಿನಲ್ಲಿ ದುಃಖ ಸುಳಿಯುವುದೇ ಇಲ್ಲ. ಮಹಿಳೆ ಎಂಬ ಕಾರಣಕ್ಕೆ ದುಃಖಿತಳಾಗದೇ ಬದುಕಿನಲ್ಲಿ ಉನ್ನತ ಗುರಿ ಹೊಂದಿ ಅದನ್ನು ಸಾಧಿಸುವ ಕಡೆಗೆ ಮುಖಮಾಡಬೇಕು ಎಂದು ಕಿವಿ ಮಾತು ಹೇಳಿದರು. 

ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಮಹಿಳಾ ಘಟಕದ ಸಂಚಾಲಕಿ ಡಾ. ಶೋಭಾ, ಮಹಿಳಾ ವೇದಿಕೆಯ ಸಂಚಾಲಕಿ ಡಾ. ಭಾರತಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. 

ಇದೇ ವೇಳೆ ಕಾಲೇಜಿನ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಹಿರಿಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗ್ಗಡೆ ಅವರನ್ನು ಸನ್ಮಾನಿಸಲಾಯಿತು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article