Mangalore: ಬೆಸೆಂಟ್ ಮಹಿಳಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ವಿಚಾರ ಸಂಕಿರಣ
ಮಂಗಳೂರು: ಬೆಸೆಂಟ್ ಮಹಿಳಾ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗ, ಬ್ಯಾಂಕ್ ಆಫ್ ಬರೋಡಾ-ಮಂಗಳೂರು, ಅವರ ಜಂಟಿ ಆಶ್ರಯದಲ್ಲಿ ‘ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತೃಭಾಷೆಯ ಮಹತ್ವ’ ಎಂಬ ವಿಷಯದ ಬಗ್ಗೆ ಅಂತರ ಮಹಾವಿದ್ಯಾಲಯ ವಿದ್ಯಾರ್ಥಿ ವಿಚಾರ ಸಂಕಿರಣ ಮತ್ತು ಶೋಧ ಪತ್ರಿಕೆ ಪ್ರಸ್ತುತಿ ಸ್ಪರ್ಧೆ ನಡೆಯಿತು.
ಬ್ಯಾಂಕ್ ಆಫ್ ಬರೋಡಾದ ಉಪ ಮಹಾಪ್ರಬಂಧಕ ಅಶ್ವಿನಿ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿ ಭಾಷೆ, ಬ್ಯಾಂಕಿನಲ್ಲಿ ಮಾತೃಭಾಷೆಯ ಮಹತ್ವ, ಬ್ಯಾಂಕಿನ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಡಬ್ಲ್ಯೂಎನ್ಇಎಸ್ನ ಉಪಾಧ್ಯಕ್ಷೆ ಹಾಗೂ ಕಾಲೇಜಿನ ಸಂಚಾಲಕಿ ಡಾ. ಮಂಜುಳಾ ಕೆ.ಟಿ. ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ತಿಳಿಸಿದರು.
ಬೆಸೆಂಟ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ರಾಜಶೇಖರ್ ಹೆಬ್ಬಾರ್ ಮಾತನಾಡಿ, ನಾವು ಯಾವುದೇ ಭಾಷೆಯನ್ನು ಕಲಿತರು ಮಾತೃಭಾಷೆಯ ಬಗ್ಗೆ ಗೌರವ, ಅಭಿಮಾನ ಹೊಂದಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ. ಇಂತಹ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ವಿಚಾರ ಸಂಕಿರಣದ ಆಯೋಜಕ ಮತ್ತು ಮುಖ್ಯಸ್ಥ ಡಾ. ಪರಶುರಾಮ ಗ. ಮಾಳಗೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಅತಿಥಿಗಳನ್ನು ಪರಿಚಯಿಸಿದರು. ಹಲೀಮಾ ಸ್ವಾಗತಿಸಿದರು. ಇಸ್ರಾ ವಂದಿಸಿ, ಅದಿತಿ ಕಾರ್ಯಕ್ರಮ ನಿರೂಪಿಸಿದರು. ವಿಚಾರ ಸಂಕಿರಣದಲ್ಲಿ ಏಳು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶೋಧ ಪತ್ರಿಕೆಯನ್ನು ಮಂಡಿಸಿದರು. ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿನಿ ಶೆಟ್ಟಿ ಕರೀನಾ ಪ್ರಥಮ, ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿನಿ ಖುಷಿ ಶೆಟ್ಟಿ ದ್ವಿತೀಯ, ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿ ಧನುಷ್ಯ ತೃತೀಯ ಹಾಗೂ ಸಲಿಹತ್ ಮಹಿಳಾ ಕಾಲೇಜು ಉಡುಪಿಯ ರುಮಾನಾ ಹಾಗೂ ವಿಶ್ವವಿದ್ಯಾಲಯ ಕಾಲೇಜಿನ ಅಸ್ತುತಿ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಡಾ. ಸುಮಾ ಟಿ.ಆರ್. ಮತ್ತು ಡಾ. ಕಲ್ಪನಾ ಪ್ರಭು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಹಿಂದಿ ವಿಭಾಗದ (ರಾಜಭಾಷೆ) ಮುಖ್ಯಪ್ರಬಂಧಕಿ ಪುಷ್ಪಲತಾ ಬಿ.ಎನ್. ಕಾಲೇಜಿನ ಉಪನ್ಯಾಸಕರುಗಳಾದ ಚೆನ್ನಕೇಶವ ಮತ್ತು ಕೀರ್ತನಾ ಶೆಟ್ಟಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.