Mangalore: ಕಾಂಗ್ರೆಸ್ನಿಂದ ದ್ವೇಷ ರಾಜಕಾರಣ
Wednesday, March 20, 2024
ಮಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ತನ್ನ ಓಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಮಂಗಳೂರಿನ ಬಜರಂಗದಳದ ಕಾರ್ಯಕರ್ತನ ಮೇಲೆ ದ್ವೇಷ ರಾಜಕಾರಣದ ಮೂಲಕ ಗೂಂಡಾ ಕಾಯ್ದೆ ದಾಖಲಿಸಿದ್ದನ್ನು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ತೀವ್ರವಾಗಿ ಖಂಡಿಸಿದರು.
ಕರ್ನಾಟಕ ರಾಜ್ಯದಲ್ಲೀಗ ಪಾಕ್ ಪರ ಘೋಷಣೆ ಕೂಗಿದರೂ ನಡೆಯುತ್ತದೆ, ಬಾಂಬ್ ಇಡಲು ಬಂದವರು ಬ್ರದರ್ಸ್ ಆಗುತ್ತಾರೆ, ಮತಾಂಧತೆ ಪ್ರದರ್ಶಿಸಿ ಗಲಭೆ ನಡೆಸುವವರು ಅಮಾಯಕರೆನಿಸಿಕೊಳ್ಳುತ್ತಾರೆ. ಆದರೆ ಜೈ ಶ್ರೀರಾಮ್ ಎಂದವರು, ಹನುಮಾನ್ ಚಾಲೀಸಾ ಹೇಳುವವರು, ಗೋಸಂರಕ್ಷಣೆ ಜೊತೆಗೆ ಹಿಂದುತ್ವದ ಹೋರಾಟ ಮಾಡುವವರು ಮಾತ್ರ ಗೂಂಡಾಗಳು! ಇದು ಕಾಂಗ್ರೆಸ್ ಆಡಳಿತದ ವೈಖರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಸುಗಳ ಮೂಲಕ ಬಜರಂಗ ದಳದ ಕಾರ್ಯಕರ್ತರನ್ನು ಹೆದರಿಸುವ ಕಾಂಗ್ರೆಸ್ಸಿನ ಪ್ರಯತ್ನ ಇಂದು ನಿನ್ನೆಯದಲ್ಲ. ಇದನ್ನು ಸಮರ್ಥವಾಗಿ ಎದುರಿಸಿಕೊಂಡೇ ಆ ಸಂಘಟನೆ ರಾಷ್ಟ್ರ ವ್ಯಾಪಿಯಾಗಿ ಈ ಮಟ್ಟದಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆ. ಮುಂದೆಯೂ ದೇಶ- ಸಂಸ್ಕೃತಿಯ ಪರ ನಮ್ಮ ಪರಿವಾರದ ಹೋರಾಟ ನಿರಂತರವಾಗಿರಲಿದೆ. ಜಾಗೃತ ಹಿಂದೂ ಸಮಾಜದ ವಿರುದ್ಧ ಇಂತಹ ದಬ್ಬಾಳಿಕೆಗಳು ಬಹಳ ದಿನ ನಡೆಯುವುದಿಲ್ಲ, ಕೂಡಲೇ ರಾಜಕೀಯ ಪ್ರೇರಿತವಾದ ಈ ಗೂಂಡಾ ಕಾಯ್ದೆಯನ್ನು ಹಿಂತೆಗೆದುಕೊಳ್ಳಲೇಬೇಕೆಂದು ಕಾಮತ್ ರಾಜ್ಯ ಸರ್ಕಾರವನ್ನು ಪ್ರಕಟಣೆಯಲ್ಲಿ ಆಗ್ರಹಿಸಿದರು