Mangalore: ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಚಾರಕಾರ್ಯ-ಕುಕ್ಕೆ ಸುಬ್ರಹ್ಮಣ್ಯ ದರ್ಶನ, ಕಾರ್ಯಕರ್ತರೊಂದಿಗೆ ಸಭೆ
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೂಲಕ ಮಾ.೨೦ ರಂದು ಪ್ರಚಾರಕಾರ್ಯ ಮತ್ತು ಕಾರ್ಯಕರ್ತರ ಭೆಟಿಯ ಕಾರ್ಯಕ್ರಮ ನಡೆಯಿತು.
ಸುಳ್ಯದ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ದಿನದ ಪ್ರವಾಸ ಆರಂಭಿದ ಬಿಜೆಪಿ ಅಭ್ಯರ್ಥಿ ಚೌಟ ಅವರನ್ನು ಸ್ಥಳಿಯ ಕಾರ್ಯಕರ್ತರು, ಪಕ್ಷದ ಮುಖಂಡರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅನೇಕ ಹಿರಿಯರು ಗೌರವಪೂರ್ವಕವಾಗಿ ಬರಮಾಡಿಕೊಂಡರು.
ಶಿಕ್ಷಣ ಕ್ರಾಂತಿಗೆ ನಾಂದಿಹಾಡಿದ, ನಗರದ ಹಳೆಯ ಬಸ್ ನಿಲ್ದಾಣದ ಬಳಿಯಿರುವ ಡಾ. ಕುರುಂಜಿ ವೆಂಕಟರಮಣ ಗೌಡರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿದ ಕ್ಯಾ. ಚೌಟರವರು, ಸಾರ್ವಜನಿಕರೊಂದಿಗೆ ಕುಶಲೋಪರಿ ವಿಚಾರಿಸಿ, ತಮ್ಮನ್ನು ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಆನಂತರದಲ್ಲಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ ಕ್ಯಾಪ್ಟನ್, ಸುಳ್ಯದ ಭಾರತೀಯ ಜನತಾ ಪಾರ್ಟಿಯ ಮಂಡಲದ ಚುನಾವಣಾ ಕಾರ್ಯಾಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆ-ದೇಶದ ಅಭಿವೃದ್ಧಿಗೆ ನಾವೆಲ್ಲ ಒಗ್ಗಟ್ಟಾಗಿ ನಿಲ್ಲಬೇಕಿದೆ, ಆದ್ದರಿಂದ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದರು.
ಸಂಘದ ಹಿರಿಯ ಮುಖಂಡರೂ, ಸಾಮಾಜಿಕ ಹೋರಾಟಗಾರರೂ ಆದ ಚಂದ್ರಶೇಖರ ತಳೂರು ಅವರನ್ನು ಸ್ವಗೃಹದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದು, ಮಾರ್ಗದರ್ಶನ ಕೋರಿದರು. ಹಾಗೆಯೇ, ಮಾಜಿ ಸಚಿವ ಎಸ್. ಅಂಗಾರ ಅವರ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.
ಇತಿಹಾಸ ಪ್ರಸಿದ್ಧ ಕುಕ್ಕೆಯ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಕ್ಯಾಪ್ಟನ್, ಸುಬ್ರಮಣ್ಯದ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರ ಭೇಟಿ ಮಾಡಿ ಆಶೀರ್ವಾದ ಪಡೆದರು.
ದಿನದ ಪ್ರವಾಸದಲ್ಲಿ ಕೃಷಿ ಸಹಕಾರಿ ಸಂಘ, ಆಲಂಕಾರು, ಸುಬ್ರಮಣ್ಯ, ಗುತ್ತಿಗಾರು ಸೇರಿದಂತೆ ವಿವಿಧ ಸಭೆಗಳಲ್ಲಿ ಭಾಗವಹಿಸಿ, ನೆರೆದ ಕಾರ್ಯಕರ್ತರೊಂದಿಗೆ ಸಂವಹನ ನಡೆಸಿದರು.
ಈ ಸಂದರ್ಭದಲ್ಲಿ ಕ್ಯಾ. ಬ್ರಿಜೇಶ್ ಚೌಟ ಅವರೊಂದಿಗೆ ದಿನದ ಕಾರ್ಯಕ್ರಮಗಳಲ್ಲಿ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯರವರು ಸೇರದಂತೆ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಇದೆಲ್ಲದರ ಮಧ್ಯೆ ಪುತ್ತೂರಿನ ಕಾರ್ಯಕರ್ತನ ಹೊಟೇಲಿಗೆ ಬೆಳ್ಳಂಬೆಳಿಗ್ಗೆಯೇ ದಿಢೀರನೆ ಭೇಟಿ ನೀಡಿ, ಎಲ್ಲರೊಡನೆ ಬೆರೆತು ಚಹಾ ಸೇವಿಸಿದ್ದು ವಿಶೇಷವಾಗಿತ್ತು.






