Moodubidire: ಮಹಾವೀರ ಕಾಲೇಜಿನಲ್ಲಿ ಉದ್ಯೋಗ ನೇಮಕಾತಿ ಅಭಿಯಾನ ಉದ್ಘಾಟನೆ

Moodubidire: ಮಹಾವೀರ ಕಾಲೇಜಿನಲ್ಲಿ ಉದ್ಯೋಗ ನೇಮಕಾತಿ ಅಭಿಯಾನ ಉದ್ಘಾಟನೆ


ಮೂಡುಬಿದಿರೆ: ಮಹಾವೀರ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬುಧವಾರ ಮಾಹೆಯಿಂದ ಹಮ್ಮಿಕೊಂಡ ವಿಶೇಷ ಉದ್ಯೋಗ ನೇಮಕಾತಿ ಅಭಿಯಾನವನ್ನು ಮಣಿಪಾಲ ಮಾಹೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಜೆರ್ರಿ ಕೆ. ಜೋಸೆಫ್ ಬುಧವಾರ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು, 1953ರಲ್ಲಿ ಪ್ರಾರಂಭವಾದ ಮಾಹೆ ಇದೇ ಮೊದಲ ಬಾರಿಗೆ ನೇಮಕಾತಿ ಅಭಿಯಾನ ನಡೆಸಿದೆ ಉದ್ಯೋಗದ ನಿರೀಕ್ಷೆಯಲ್ಲಿರುವವರು ಅತಿಯಾದ ಆತ್ಮವಿಶ್ವಾಸದ ಬದಲು ಸರಿಯಾದ ದಾರಿಯನ್ನು ಕಂಡುಕೊಂಡು ಉದ್ಯೋಗದ ಸವಾಲುಗಳನ್ನು ಎದುರಿಸಲು ಕಠಿಣ ಪರಿಶ್ರಮ ಹಾಗೂ ಸಿದ್ಧತೆ ನಡೆಸಬೇಕು. ಶೈಕ್ಷಣಿಕ ಗಳಿಕೆಯ ಜತೆಗೆ ಕೌಶಲ್ಯಕ್ಕೂ ಒತ್ತು ನೀಡಬೇಕು ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಕಾಲೇಜಿನಲ್ಲಿ ಪೂರಕ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು. 

ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ, ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಪ್ರೊ. ಹರೀಶ್ ಕಾಪಿಕಾಡ್, ಕಾಲೇಜಿನ ನೇಮಕಾತಿ ವಿಭಾಗದ ಪ್ರೊ. ಹರೀಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ. ಉಪಸ್ಥಿತರಿದ್ದರು. 

ಮಂಗಳೂರಿನ ಮೈಂಡ್‌ಫುಲ್ ಕನ್ಸಲ್ಟಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ ಭಟ್ ಪ್ರಾಸ್ತಾವಿಕವಾಗಿ  ಮಾತನಾಡಿ ಔದ್ಯೋಗಿಕ ಕೌಶಲ್ಯವನ್ನು ಹೆಚ್ಚಿಸಲು ಅನುಕೂಲ ವಾಗುವಂತೆ ಮೂರು ಮಾದರಿ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದ್ದು ಈ ಪುಸ್ತಕಗಳ ಬಗ್ಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮಣಿಪಾಲ ಅಕಾಡೆಮಿಯಲ್ಲಿ ಕಲಿತು ಪದವಿಯ ನಂತರ ವಿದ್ಯಾರ್ಥಿ ವೇತನ ಪಡೆದು ಉನ್ನತ ವ್ಯಾಸಂಗಕ್ಕೆ ಮಾಹೆ ಸಂಸ್ಥೆಗೆ ಬರುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ. ೭೫ರಷ್ಟು ವಿನಾಯತಿ ನೀಡಲಾಗುತ್ತಿದೆ ಎಂದರು.

ವಿದ್ಯಾರ್ಥಿ ಮೆಲ್ರಾಯ್ ಸ್ವಾಗತಿಸಿ, ಕಾರ್ತಿಕೇಯ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಶರಣ್ಯಾ ಮಲ್ಯ ಕಾರ್ಯಕ್ರಮ ನಿರೂಪಿಸಿ, ನಿತಿನ್ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article