Mangalore: ಅಭ್ಯರ್ಥಿ ಘೋಷಣೆ ಮೊದಲ ದಿನವೇ ದೈವ-ದೇವರ, ಹಿರಿಯರ ಆಶೀರ್ವಾದ ಕೇಳಿದ ಕ್ಯಾ. ಬೃಜೇಶ್ ಚೌಟ

Mangalore: ಅಭ್ಯರ್ಥಿ ಘೋಷಣೆ ಮೊದಲ ದಿನವೇ ದೈವ-ದೇವರ, ಹಿರಿಯರ ಆಶೀರ್ವಾದ ಕೇಳಿದ ಕ್ಯಾ. ಬೃಜೇಶ್ ಚೌಟ


ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಮೊದಲ ದಿನವೇ ಕ್ಯಾ. ಬೃಜೇಶ್ ಚೌಟ ಹಲವು ದೇವಸ್ಥಾನ, ದೈವಸ್ಥಾನಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಮಂಗಳೂರಿನ ಕಾಳಿಕಾಂಬ ದೇವಸ್ಥಾನ, ರಥಬೀದಿ ವೆಂಕಟರಮಣ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಮಂಗಳಾದೇವಿ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದಲ್ಲದೆ, ಬೃಜೇಶ್ ಚೌಟ ತಾನು ಪ್ರತಿನಿಧಿಸುವ ರಥಬೀದಿ ಮತಗಟ್ಟೆ ವ್ಯಾಪ್ತಿಯ ಪಕ್ಷದ ಬೂತ್ ಅಧ್ಯಕ್ಷರ ಮನೆಗೆ ಭೇಟಿಯಿತ್ತು ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ಇದರ ಬೆನ್ನಲ್ಲೇ ಬೃಜೇಶ್ ಚೌಟ ಅವರ ಮಾರ್ಗದರ್ಶಕರೂ ಆದ ನಿಟ್ಟೆ ಯುನಿವರ್ಸಿಟಿ ಚಾನ್ಸಲರ್ ವಿನಯ ಹೆಗ್ಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. 

ಮಂಗಳೂರಿನಲ್ಲಿ ಕಾಲಿಗೆ ಚಕ್ರ ಕಟ್ಟಿದಂತೆ ತಿರುಗಿದ ಚೌಟರು, ಮಾಜಿ ಸಚಿವ ಕೃಷ್ಣ ಪಾಲೆಮಾರ್ ಮತ್ತು ಮಾಜಿ ಶಾಸಕ ಯೋಗೀಶ್ ಭಟ್ ಮನೆಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಮನೆಗೂ ತೆರಳಿ ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಸಹಕಾರ ಕೋರಿದ್ದಾರೆ. ಸಂಜೆಯ ವೇಳೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮನೆಗೆ ತೆರಳಿ ಆಶೀರ್ವಾದ ಪಡೆದಿದ್ದಲ್ಲದೆ, ಚುನಾವಣೆ ಎದುರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. 

ಸಂಜೆಯಾಗುತ್ತಿದ್ದಂತೆ ಪುತ್ತೂರಿಗೆ ತೆರಳಿದ್ದು ಭಾರೀ ಸಂಖ್ಯೆಯಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು ಬೃಜೇಶ್ ಚೌಟ ಅವರನ್ನು ಸ್ವಾಗತಿಸಿದ್ದಾರೆ. ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದಾರೆ. ಇದೇ ವೇಳೆ, ಪುತ್ತೂರು ಸೈನಿಕರ ಭವನಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article