Mangalore: ನಾವು ಬೆಳೆದು ವಿದ್ಯಾರ್ಥಿಗಳನ್ನು ಬೆಳೆಸಲು ಕೌಶಲ್ಯ ತರಬೇತಿಗಳ ಅಗತ್ಯ: ಡಾ. ಶೋಭಾ ಜಿ.
ಮಂಗಳೂರು: ಈಗಾಗಲೇ ನಮ್ಮಲ್ಲಿರುವ ವಿಷಯ ಜ್ಞಾನದ ಜೊತೆಗೆ ಪ್ರಸಕ್ತ ಅಗತ್ಯವಿರುವ ಕೌಶಲ್ಯಗಳನ್ನು ಗಳಿಸಿಕೊಂಡು, ವಿದ್ಯಾರ್ಥಿಗಳಿಗೆ ಕಲಿಸುವುದರ ಮೂಲಕ ಅವರುಗಳ ಭವಿಷ್ಯದ ಸವಾಲುಗಳಿಗೆ ಸನ್ನದ್ಧರಾಗಿಸಬೇಕು ಎಂದು ಶಿಕ್ಷಣ ಇಲಾಖೆಯ ಹೆಚ್ವುವರಿ ನಿರ್ದೇಶಕಿ ಡಾ. ಶೋಭಾ ಜಿ. ಹೇಳಿದರು.
ಅವರು ಮಾ.14 ರಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು, ವಾಧ್ವಾನಿ ಫೌಂಡೇಶನ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರುಗಳಿಗೆ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯೋಗ ಕೌಶಲ್ಯದಿಂದ ನಮಗೆ ಸ್ವಯಂ ಆತ್ಮಸಂತೃಪ್ತಿಯ ಜೊತೆಗೆ ವೃತ್ತಿಯಲ್ಲಿಯೂ ಉನ್ನತಿ ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿ ಮಂಗಳೂರಿನ ಜಂಟಿ ನಿರ್ದೇಶಕ ಪ್ರೊ. ರಾಮೇಗೌಡ ಎಂ. ಮಾತನಾಡಿ, ನಮ್ಮಲ್ಲಿನ ಖುಣಾತ್ಮಕ ಚಿಂತನೆಗಳನ್ನು ಬಿಟ್ಟು ಧನಾತ್ಮಕ ಚಿಂತನೆಗಳನ್ನು ಮಾಡಬೇಕು. ಇದರೊಂದಿಗೆ ವಿದ್ಯಾರ್ಥಿಗಳನ್ನೂ ಧನಾತ್ಮಕವಾಗಿ ಬೆಳೆಸಲು ಪ್ರೇರೆಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ್ ಭಂಡಾರಿ ಎಂ. ಮಾತನಾಡಿ, ಇಂದಿನ ಯುವಜನತೆಗೆ ನಿನ್ನೆಯ ಶಿಕ್ಷಣವನ್ನು ನೀಡಿದರೆ ಅವರು ನಾಳೆಯ ಭವಿಷ್ಯವನ್ನು ಹಾಳು ಮಾಡಿದಂತೆ ಎಂಬ ಮಾತಿದ್ದು, ಇಂದು ಎಲ್ಲಾ ರೀತಿಯ ಕೌಶಲ್ಯಗಳು ದೊರಕುತ್ತಿದ್ದು, ಮುಂದಿನ ೧೦ ವರ್ಷದಲ್ಲಿ ನಮ್ಮ ಶಿಕ್ಷಣ ಯಾವ ರೀತಿಯಲ್ಲಿ ಬದಲಾವಣೆಯಾಗಿರುತ್ತದೆ ಎಂಬುವುದು ಯಾರಿಗೂ ತಿಳಿದಿಲ್ಲ ಆದುದರಿಂದ ನಾವು ಇಂದಿನ ವ್ಯವಸ್ಥೆಗೆ ಅನುಗುಣವಾಗಿ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.
ಬೆಂಗಳೂರಿನ ವಾಧ್ವಾನಿ ಫೌಂಡೇಶನ್ ತರಬೇತುದಾರೆ ಸ್ವಾತಿ ಪುತ್ರನ್, ಮಂಗಳೂರು ಜಂಟಿ ನಿರ್ದೇಶಕರ ಕಛೇರಿಯ ಡಾ. ರಜನಿ, ಬೆಂಗಳೂರು ಶಿಕ್ಷಣ ಇಲಾಖೆಯ ಶಿವಕುಮಾರ್, ವಿಜಯ್ ಕುಮಾರ್, ದ.ಕ. ಉಡುಪಿ ಜಿಲ್ಲೆಗಳ ಸರ್ಕಾರಿ ಕಾಲೇಜುಗಳ ಪ್ರಾದ್ಯಾಪಕರುಗಳು ಉಪಸ್ಥಿತರಿದ್ದರು.
ಮಂಗಳೂರು ಜಂಟಿ ನಿರ್ದೇಶಕರ ಕಛೇರಿಯ ವಿಶೇಷ ಅಧಿಕಾರಿ ದೇವಿಪ್ರಸಾದ್ ಸ್ವಾಗತಿಸಿದರು. ಉದ್ಯೋಗ ಕೋಶದ ಸಂಯೋಜಕಿ ಡಾ. ಮಾಲತಿ ಕೆ. ನಿರೂಪಿಸಿ, ಐಕ್ಯೂಎಸಿ ಸಹ ಸಂಯೋಜಕಿ ಡಾ. ಜೋತಿಪ್ರಿಯಾ ವಂದಿಸಿದರು.
ಬಳಿಕ ಬೆಂಗಳೂರಿನ ವಾಧ್ವಾನಿ ಫೌಂಡೇಶನ್ ತರಬೇತುದಾರೆ ಸ್ವಾತಿ ಪುತ್ರನ್ ಅವರು ಪ್ರಾದ್ಯಾಪಕರುಗಳಿಗೆ ಉದ್ಯೋಗ ಕೌಶಲ್ಯ ತರಬೇತಿ ನೀಡಿದರು.