Mangalore: ನದಿಗೆ ಹಾರಿ ತಾಯಿ, ಮಗು ಆತ್ಮಹತ್ಯೆ-ಶವ ಪತ್ತೆ
ಮಂಗಳೂರು: ಅಡ್ಯಾರ್ ಪದವಿನಿಂದ ನಾಪತ್ತೆಯಾಗಿದ್ದ ತಾಯಿ, ಮಗು ಹರೇಕಳ ಗ್ರಾಮದ ಕಡವಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ಶುಕ್ರವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದು, ಒಂದು ವರ್ಷದ ಗಂಡು ಮಗುವಿನೊಂದಿಗೆ ಗೃಹಿಣಿ ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಅಡ್ಯಾರು ಪದವಿನ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ಚೈತ್ರಾ(30) ಮೃತ ಗೃಹಿಣಿ. ಚೈತ್ರಾ ಶುಕ್ರವಾರ ಮಧ್ಯಾಹ್ನ ತನ್ನ ಒಂದು ವರುಷದ ಗಂಡು ಮಗು ದಿಯಾಂಶ್ ಜತೆ ಆಟೋ ರಿಕ್ಷಾದಲ್ಲಿ ಹರೇಕಳ ಸೇತುವೆಯ ಮೂಲಕ ಹರೇಕಳ ಕಡವಿನಬಳಿ ಬಂದಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ನದಿ ತೀರದಲ್ಲಿ ಚೈತ್ರಾ ಮಗುವನ್ನ ಎತ್ತಿಕೊಂಡು ಸಾಗುತ್ತಿರುವುದನ್ನ ಸ್ಥಳೀಯರೂ ನೋಡಿದ್ದರು.
ಮಧ್ಯಾಹ್ನದ ಬಳಿಕ ಚೈತ್ರಾಳ ಕುಟುಂಬಸ್ಥರು ಹರೇಕಳಕ್ಕೆ ಬಂದು ವಿಚಾರಿಸಿದ್ದು, ಚೈತ್ರಾ ನಾಪತ್ತೆಯಾಗಿರುವ ಬಗ್ಗೆ ತಿಳಿದಿತ್ತು. ರಾತ್ರಿ 8.30 ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ಚೈತ್ರ ಮತ್ತು ಆಕೆಯ ಮಗುವಿನ ಶವ ಪತ್ತೆಯಾಗಿದೆ. ಮಹಿಳೆಯು ಮಗುವಿನೊಂದಿಗೆ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚೈತ್ರಾಳ ಪತಿ ನಾಗರಾಜ್ ಅವರು ದಿನಗೂಲಿ ನೌಕರನಾಗಿದ್ದು ಪತ್ನಿ, ಮಗುವನ್ನ ಚೆನ್ನಾಗಿಯೇ ನೋಡಿ ಕೊಳ್ಳುತ್ತಿದ್ದರೆಂದು ಕುಟುಂಬವನ್ನ ಹತ್ತಿರದಿಂದ ಬಲ್ಲವರು ತಿಳಿಸಿದ್ದಾರೆ. ಕಳೆದ ಹತ್ತು ದಿವಸಗಳ ಹಿಂದಷ್ಟೆ ನಾಗರಾಜ್, ಚೈತ್ರಾ ದಂಪತಿ ತಮ್ಮ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನ ದೇರಳಕಟ್ಟೆಯ ವೃದ್ಧಾಶ್ರಮವೊಂದರಲ್ಲಿ ಆಚರಿಸಿ ಸಂಭ್ರಮಿಸಿದ್ದರು.