Moodubidire: ಸಮಾನ ಹಕ್ಕುಗಳಿಗಾಗಿ ಹೋರಾಟ ಮಹಿಳಾ ದಿನಾಚರಣೆಯ ಉದ್ದೇಶ: ವಿಜಯಲಕ್ಷ್ಮಿ ಮಾರ್ಲ
Sunday, March 10, 2024
ಮೂಡುಬಿದಿರೆ: ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಹಕ್ಕುಗಳನ್ನು ಕೊಡಿಸುವುದು, ಮಹಿಳಾ ದೌರ್ಜನ್ಯದ ವಿರುದ್ಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ದೌರ್ಜನ್ಯದ ಬಗ್ಗೆ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸುವುದು, ಸಾಮಾಜಿಕವಾಗಿ ನಮ್ಮನ್ನು ನಾವು ಬಲಪಡಿಸಿಕೊಳ್ಳುವುದು ವಿಶ್ವ ಮಹಿಳಾ ದಿನಾಚರಣೆಯ ಮೂಲ ಉದ್ದೇಶವಾಗಿದೆ. 1910ರಿಂದಲೇ ಮಹಿಳಾ ದಿನಾಚರಣೆ, ಸ್ತ್ರೀಯರ ಪರ ಹೋರಾಟಗಳು ನಿರಂತರವಾಗಿ ನಡೆಯುತ್ತಿದ್ದರೂ ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಎಡವಿದ್ದೇವೆ ಎಂದು ಶ್ರೀ ಮಹಾವೀರ ಕಾಲೇಜಿನ ಕನ್ನಡ ಉಪನ್ಯಾಸಕಿ ವಿಜಯಲಕ್ಷ್ಮೀ ಮಾರ್ಲ ಹೇಳಿದರು.
ಮೂಡುಬಿದಿರೆ ಬಂಟರ ಸಂಘ ಮಹಿಳಾ ಘಟಕದ ವತಿಯಿಂದ ಮಾ. 9ರಂದು ಇಲ್ಲಿನ ಕನ್ನಡ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಧ್ಯಾನ ಮತ್ತು ಯೋಗ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಭಾರತಿ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು ಧ್ಯಾನ ಮಾಡುವುದರಿಂದ ನಮ್ಮ ಜೀವನದಲ್ಲಿ ಆಗುವ ಪ್ರಯೋಜನಗಳನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶೋಭಾ ಎಸ್ ಹೆಗ್ಡೆ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸೌಮ್ಯ ಎಸ್. ಶೆಟ್ಟಿಯವರಿಂದ ವರದಿ ವಾಚಸಿದರು.ಬಕೋಶಾಧಿಕಾರಿ ಗೀತಾ. ಪಿ ಶೆಟ್ಟಿಯವರಿಂದ ಲೆಕ್ಕಪತ್ರ ಮಂಡಸಿದರು.
ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಪದ್ಮಾವತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ಪ್ರಫುಲ್ಲಾ ಶೆಟ್ಟಿ ವಂದಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಅನಿತಾ ಶೆಟ್ಟಿ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ರಂಜಿಸಿದರು.