Moodubidire: ಕೆ. ಮಹಾಬಲ ಭಂಡಾರಿ ಮೂಡುಬಿದಿರೆ ನಿಧನ
Sunday, March 17, 2024
ಮೂಡುಬಿದಿರೆ: ಇಲ್ಲಿನ ರೇಂಜ್ ಫಾರೆಸ್ಟ್ ಆಫೀಸ್ ಪರಿಸರದ ಸಲ್ದಾನ ಕಂಪೌಂಡ್ ನಿವಾಸಿ, ವಿಶ್ರಾಂತ ಮುಖ್ಯ ಶಿಕ್ಷಕ ಕೆ. ಮಹಾಬಲ ಭಂಡಾರಿ (91) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹ ‘ಹರ್ಷ’ದಲ್ಲಿ ಮಾ.16 ರಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೂಲತಃ ಕಡಂದಲೆಯವರಾದ ಅವರು ಶಿಕ್ಷಕ ತರಬೇತಿಯ ಬಳಿಕ ಇರುವೈಲು ಮುಳಿಬೆಟ್ಟು, ಮೂಡು ಮಾರ್ನಾಡು, ಕೋಟೆ ಬಾಗಿಲು, ಕರಿಂಜೆಗುತ್ತು, ಕೊಡಂಗಲ್ಲು, ಮೂಡುಬಿದಿರೆ ಥರ್ಡ್ ಶಾಲೆ ಹೀಗೆ ಹಲವೆಡೆ ಮುಖ್ಯೋಪಾಧ್ಯಾಯರಾಗಿಯೂ ಒಟ್ಟು ೩೬ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ, ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿಯಲ್ಲಿ ಗಮನಾರ್ಹವಾಗಿ ತೊಡಗಿಕೊಂಡಿದ್ದ ಅವರ ಸಹಸ್ರಾರು ವಿದ್ಯಾರ್ಥಿಗಳು ಸಮಾಜದಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡಿದ್ದಾರೆ.
ಸಾಮಾಜಿಕ, ಧಾರ್ಮಿಕ ರಂಗದಲ್ಲಿ ಸಕ್ರಿಯರಾಗಿ ಭಂಡಾರಿ ಸಮಾಜದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿಯೂ ಅವರು ಕೊಡುಗೆ ಸಲ್ಲಿಸಿದ್ದರು.
ಭಂಡಾರಿ ಸಮಾಜ ಸೇವಾ ಸಂಘ, ಪಿಂಚಣಿದಾರರ ಸಂಘ, ಮೂಡುಬಿದಿರೆಯ ಸಮಾಜ ಮಂದಿರದ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡು ಗೌರವಿಸಲ್ಪಟ್ಟಿದ್ದರು.