Udupi: ಕೇಂದ್ರದ ವಿರುದ್ಧ ಚೆಂಬು ಹಿಡಿದು ಪ್ರತಿಭಟನೆ
ಉಡುಪಿ: ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ದ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚೆಂಬು ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಬರಬೇಕಾಗಿರುವ ತೆರಿಗೆ ಪಾಲನ್ನು ನೀಡದೆ ಜನರಿಗೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿಯ ಜನವಿರೋಧಿ ವರ್ತನೆಯನ್ನು ಖಂಡಿಸುವ ಸಲುವಾಗಿ ಬ್ಲಾಕ್ ವ್ಯಾಪ್ತಿಯಲ್ಲಿ ವಿಭಿನ್ನವಾಗಿ ಅಭಿಯಾನ ಕೈಗೊಳ್ಳಲಾಯಿತು.
ರಾಜ್ಯ, ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಬಿಜೆಪಿಯ ಸಂಸದರು ಕೇಂದ್ರದ ಮುಂದೆ ಬಾಯಿ ಬಿಚ್ಚುತ್ತಿಲ್ಲ. ದೇಶದಲ್ಲಿಯೇ ಅತೀ ಹೆಚ್ಚು ತೆರಿಗೆ ಸಂಗ್ರಹ ಮಾಡುವ ರಾಜ್ಯ ಕರ್ನಾಟಕವಾಗಿದ್ದು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ನೀಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ನೀಡದೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ. ಕೇಂದ್ರದ ಬಿಜೆಪಿ ಸರಕಾರ ನೀಡಿದ ಯಾವುದೇ ಭರವಸೆಗಳು ಈವರೆಗೆ ಈಡೇರಿಲ್ಲ. ಈ ಬಾರಿ ಮತ್ತೆ ದೇಶದ ಮತದಾರರು ಬಿಜೆಪಿಯನ್ನು ಬೆಂಬಲಿಸಿದರೆ ಮುಂದೆ ಪ್ರತಿಯೊಬ್ಬರಿಗೂ ಚೊಂಬೇ ಗತಿಯಾಗಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ನಾಯಕರಾದ ನಾಗೇಶ್ ಉದ್ಯಾವರ, ಮಹಾಬಲ ಕುಂದರ್, ಆನಂದ ಪೂಜಾರಿ, ಸತೀಶ್ ಮಂಚಿ, ಸದಾಶಿವ ಪೂಜಾರಿ ಕಟ್ಟೆಗುಡ್ಡೆ, ಸಂಧ್ಯಾ ತಿಲಕರಾಜ್, ಅರ್ಚನಾ, ನರಸಿಂಹಮೂರ್ತಿ, ರಾಜೇಶ್ ನಾಯಕ್, ಶರತ್ ಶೆಟ್ಟಿ, ಸತೀಶ್ ಪುತ್ರನ್, ಭರತ್, ಪ್ರಮೀಳಾ ಸುವರ್ಣ ಮೊದಲಾದವರಿದ್ದರು.