Bantwal: ಬಿ.ಸಿ.ರೋಡಿನ ಬ್ರಹ್ಮಶ್ರೀನಾರಾಯಣಗುರು ವೃತ್ತ ತೆರವು
ಬಂಟ್ವಾಳ: ಬಿ.ಸಿ. ರೋಡು-ಅಡ್ಡಹೊಳೆಯವರೆಗಿನ ಚತುಷ್ಪಥ ರಸ್ತೆಕಾಮಗಾರಿಯ ಹಿನ್ನಲೆಯಲ್ಲಿ ಬಿ.ಸಿ. ರೋಡಿನ ಬ್ರಹ್ಮಶ್ರೀನಾರಾಯಣಗುರು ವೃತ್ತವನ್ನು ಸೋಮವಾರ ಸಂಜೆ ತೆರವುಗೊಳಿಸಲಾಯಿತು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರ ಸಹಿತ ಪ್ರಮುಖರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ವೃತ್ತವನ್ನು ಕಾಮಗಾರಿ ನಡೆಸುವ ಗುತ್ತಿಗೆ ಸಂಸ್ಥೆಯ ಜೆಸಿಬಿ ಬಳಸಿ ನೆಲಸಮಗೊಳಿಸಿದರು.
ಬಿ.ಸಿ.ರೋಡು-ಅಡ್ಡಹೊಳೆಯವರೆಗಿನ ಚತುಷ್ಪಥ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಸದ್ಯ ನಾರಾಯಣಗುರು ವೃತ್ತದ ಬಳಿ ಬಂಟ್ವಾಳ ಮತ್ತು ಗೂಡಿನಬಳಿ ರಸ್ತೆಗೆ ಸಂಚರಿಸುವ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸುವ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಸಂಬಂಧಿಸಿದಂತೆ 100ರಿಂದ 150 ಮೀ. ದೂರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಂದಿರವಿರುವ ಹಿನ್ನಲೆಯಲ್ಲಿ ಸಂಘದ ಮನವಿಯ ಮೇರೆಗೆ ಬಂಟ್ವಾಳ ಪುರಸಭೆಯ ಶಿಫಾರಸಿನಂತೆ ರಾ.ಹೆ. ಇಲಾಖೆಯ ಅನುಮತಿಯನ್ವಯ ಬ್ರಹ್ಮಶ್ರೀ ನಾರಾಯಣಗುರುಗಳ ವೃತ್ತ ನಿರ್ಮಿಸಿ ನಾಮಕರಣಗೊಳಿಸಲಾಗಿತ್ತು.
ಇದೇ ವೃತ್ತವನ್ನು ಕೇಂದ್ರೀಕರಿಸಿ ಬಿ.ಸಿ.ರೋಡು-ಅಡ್ಡಹೊಳೆಯವರೆಗಿನ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಬಂಟ್ವಾಳ ನಗರ, ಧರ್ಮಸ್ಥಳ, ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಪಾಣೆಮಂಗಳೂರು ಪೇಟೆಯನ್ನು ಸಂಪರ್ಕಿಸುವ ಕೂಡು ರಸ್ತೆಯ ಮಧ್ಯಭಾಗ ಬೃಹದಾಕಾರವಿದ್ದ ವೃತ್ತಕ್ಕೆ ಬಿಲ್ಲವ ಸಮಾಜ ಸೇವಾ ಸಂಘ ಪೀಠವನ್ನಿರಿಸಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ನಾಮಕರಣಗೊಳಿಸಲಾಗಿತ್ತು.
ಇದೀಗ ವೃತ್ತದ ಸಮೀಪ ಕಾಂಕ್ರೀಟೀಕರಣ ರಸ್ತೆ ಕಾಮಗಾರಿ ಬಿರುಸುಗೊಂಡಿದ್ದು ವೃತ್ತವನ್ನು ತೆರವುಗೊಳಿಸಲಾಗಿದೆ. ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಸುಂದರವಾದ ವೃತ್ತ ಪುನರ್ ನಿರ್ಮಾಣಗೊಳ್ಳಲಿದ್ದು, ಪೀಠದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆಯು ಇಲ್ಲಿ ರಚಿಸಲು ಬಿಲ್ಲವ ಸಂಘದ ಪ್ರಮುಖರು ಚಿಂತನೆ ನಡೆಸಿದ್ದಾರೆ.