Putturu: ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಟೋಲ್ಗೇಟ್’ ಬೇಡ: ಬಿ.ಎಂ. ಭಟ್
Wednesday, May 29, 2024
ಪುತ್ತೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ನವೀಕರಣಗೊಂಡು ಚತುಷ್ಪಥ ರಸ್ತೆಯಾಗಿ ಬದಲಾಗುತ್ತಿದೆ. ಈ ಹೆದ್ದಾರಿಯಲ್ಲಿ ಮುಂದೆ ಗುಂಡ್ಯದಿಂದ ಬಿಸಿ ರೋಡು ತನಕ ಯಾವುದೇ ಕಾರಣಕ್ಕೂ ಟೋಲು ವ್ಯವಸ್ಥೆ ಹಾಕಬಾರದು ಎಂದು ಪುತ್ತೂರು ಕಾರ್ಮಿಕ ಮುಖಂಡ ಬಿ.ಎಂ. ಭಟ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಗುಂಡ್ಯದಿಂದ ಬಿಸಿ ರೋಡು ತನಕ ದಿನನಿತ್ಯ ಬಡ, ಮದ್ಯಮ ವರ್ಗದ ಜನರು ಹಾಗೂ ರೈತರ ಓಡಾಟ ಹೆಚ್ಚು ಇರುವ ಕಾರಣ ಅವರಿಗೆ ಟೋಲು ಪಾವತಿಯ ಸಮಸ್ಯೆ ಬರುವಂತಾಗಬಾರದು. ಬೆಂಗಳೂರಿನಿಂದ ಬರುವ ಕೆಲವೇ ಬಸ್ಸು, ಕಾರು, ಲಾರಿಗಳ ಹೆಸರಲ್ಲಿ ಟೋಲು ಹಾಕುವ ಮೂಲಕ ಬಡಜನರಿಗೂ ಅದರ ಸಮಸ್ಯೆ ತಟ್ಟುವಂತಾಗಬಾರದು. ಗುಂಡ್ಯ-ಹಾಸನದ ನಡುವೆ ಈ ಟೋಲು ವ್ಯವಸ್ಥೆಯನ್ನು ಸರ್ಕಾರ ಮಾಡಲು ನಮ್ಮ ಅಡ್ಡಿಯಿಲ್ಲ. ಆದರೆ ಗುಂಡ್ಯ-ಬಿಸಿ ರೋಡು ನಡುವೆ ಟೋಲ್ ಗೇಟ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾದರೆ ಕಾರ್ಮಿಕ ಸಂಘಟನೆಗಳು, ರೈತಸಂಘಟನೆಗಳು ಹಾಗೂ ಸ್ಥಳೀಯ ಜನತೆಯ ಜಂಟಿ ಆಶ್ರಯದಲ್ಲಿ ಹೋರಾಟ ನಡೆಸಲು ಮುಂದಾಗಲಿದ್ದೇವೆ. ಅಂತಹ ಸ್ಥಿತಿ ನಿರ್ಮಾಣವಾಗದಂತೆ ಸರ್ಕಾರಕ್ಕೆ ಮೊದಲೇ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಬಿ.ಎಂ. ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.