Ujire: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ-ಮೇ.೩೦ ರಂದು ಧರ್ಮಸ್ಥಳದಲ್ಲಿ ರಜತಮಹೋತ್ಸವ ಸಮಾರಂಭ
ಉಜಿರೆ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭ ಮೇ.30 ರಂದು ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು ಜೈನಮಹಿಳಾ ಒಕ್ಕೂಟದ ಅಧ್ಯಕ್ಷ ಬೆಂಗಳೂರಿನ ಪದ್ಮಿನಿ ಪದ್ಮರಾಜ್ ತಿಳಿಸಿದ್ದಾರೆ.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸೇವೆ, ಸಾಧನೆ ಬಗ್ಗೆ ಅವರು ಧರ್ಮಸ್ಥಳದಲ್ಲಿ ಮಾಹಿತಿ ನೀಡಿದರು.
ಮೇ.30 ರಂದು ಪೂರ್ವಾಹ್ನ ಹತ್ತು ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತಮಹೋತ್ಸವ ಸಮಾರಂಭವನ್ನು ಉದ್ಘಾಟಿಸುವರು. ಖ್ಯಾತ ಹೃದ್ರೋಗ ತಜ್ಞರಾದ ಬೆಂಗಳೂರಿನ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರೀ ಮತ್ತು ಚಲನಚಿತ್ರ ನಟಿ ಪದ್ಮಜಾ ರಾವ್ ಶುಭಾಶಂಸನೆ ಮಾಡುವರು.
ಹೇಮಾವತಿ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ, ಬೆಳಗಾವಿಯ ಸುಮನ್ ಪತ್ರಾವಳಿ, ಮೂಡಬಿದ್ರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುರೀಮಾ ಯಶವಂತ್, ಹುಣಸೂರಿನ ಛಾಯಾ ಮತ್ತು ಮೈಸೂರಿನ ಅನನ್ಯಾ ಅವರನ್ನು ಸನ್ಮಾನಿಸಲಾಗುವುದು.
ರಾಜ್ಯದಲ್ಲಿರುವ ಜೈನ ಮಹಿಳಾ ಒಕ್ಕೂಟದ ಎಲ್ಲಾ ಶಾಖೆಗಳಿಂದ ಸುಮಾರು ಒಂದು ಸಾವಿರ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದು ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಎಂದು ಪದ್ಮಿನಿಪದ್ಮರಾಜ್ ಮಾಹಿತಿ ನೀಡಿದರು.