
Kundapura: ಬಸ್ ಢಿಕ್ಕಿ-ಬೈಕ್ ಸವಾರ ಸಾವು
ಕುಂದಾಪುರ: ಕೆಎಸ್ಆರ್ಟಿಸಿ ಬಸ್ಸೊಂದು ಬೈಕ್ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸರ್ಕಲ್ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮೃತಪಟ್ಟ ಬೈಕ್ ಸವಾರ ಕೋಟತಟ್ಟು ಕಲ್ಮಾಡಿ ರಸ್ತೆಯ ಪಾತ್ರಿ ಮಂಜುನಾಥ್ ಗಾಣಿಗರವರ ಪುತ್ರ ವಾಸುದೇವ ಗಾಣಿಗ (33) ಎಂದು ಗುರುತಿಸಲಾಗಿದೆ.
ವಾಸುದೇವ ಗಾಣಿಗರು ರಾತ್ರಿ ಸುಮಾರು 12 ಗಂಟೆಗೆ ತೆಕ್ಕಟ್ಟೆ ಸಾಯಿಗ್ರಾಂಡ್ ಹೋಟೆಲ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ಕೋಟ ಸರ್ಕಲ್ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಮಂಗಳೂರಿನಿಂದ ಶಿರಸಿ ಕಡೆ ಹೋಗುವ ಕೆಎಸ್ಆರ್ ಟಿಸಿ ಬಸ್ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರನಿಗೆ ತೆಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೋಟ ಠಾಣೆಯ ಎಎಸ್ಐ ಜಯಪ್ರಕಾಶ್ ಹಾಗೂ ಸಿಬ್ಬಂದಿ ಅಶೋಕ್ ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಕೋಟ ಶವಗಾರಕ್ಕೆ ಸಾಗಿಸಿರುತ್ತಾರೆ.
ಜಯಪ್ರಕಾಶ್ ಹೆಗ್ಡೆ ಭೇಟಿ:
ಕೋಟ ಸರ್ಕಲ್ ನಲ್ಲಿ ಶನಿವಾರ ರಾತ್ರಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ವಾಸುದೇವ ಅವರ ಮನೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ರಾಷ್ಟ್ರೀಯ ಹೆದ್ದಾರಿ 66 ರ ಕೋಟ, ಸಾಲಿಗ್ರಾಮ, ಸಾಸ್ತಾನ, ಬ್ರಹ್ಮಾವರ ಈ ಸರ್ಕಲ್ಗಳಲ್ಲಿ ಹೆಚ್ಚುತ್ತಿರುವ ಅಪಘಾತದಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ನಡೆಸಿದ್ದು, ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ಅಲ್ಲಿ ಸೇರಿದ್ದ ಜನರು ಹೆಗಡೆಯವರ ಗಮನಕ್ಕೆ ತಂದರು. ಇಕ್ಕಟ್ಟಾದ ಸರ್ವಿಸ್ ರಸ್ತೆ, ಮಣ್ಣು, ಕಸ ತುಂಬಿದ ಹೆದ್ದಾರಿ, ರಾತ್ರಿ ವೇಳೆ ಬೆಳಗದ ದಾರಿ ದೀಪ, ರಸ್ತೆ ಸುರಕ್ಷಾ ನಿಯಮ ಪಾಲಿಸದೇ ನುಗ್ಗುವ ಪಾದಚಾರಿಗಳು ಮೊದಲಾದ ಹಲವು ಸಮಸ್ಯೆಗಳು ಅಪಘಾತಕ್ಕೆ ಕಾರಣವಾಗಿ ಅಮಾಯಕರನ್ನು ಬಲಿಪಡೆಯುತ್ತಿವೆ ಎಂಬ ಅಂಶಗಳನ್ನು ತಿಳಿಸಲಾಯಿತು. ಸಮಸ್ಯೆಗಳ ಕಡೆ ಗಮನಹರಿಸಿ, ಮುಂದಿನ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಜಯಪ್ರಕಾಶ್ ಹೆಗ್ಡೆ ಸೂಚನೆ ನೀಡಿದರು.
ಗೋಪಾಲ್ ಬಂಗೇರ, ವಿನಯ ಕಬ್ಯಾಡಿ, ದಿನೇಶ್ ಗಾಣಿಗ, ನಾಗೇಂದ್ರ ಪುತ್ರನ್ ಉಪಸ್ಥಿತರಿದ್ದರು.