
Mangalore: ಸ್ವಯಂ ಘೋಷಿತ ಆಸ್ತಿ ತೆರಿಗೆ ವಿಪರೀತ ಹೆಚ್ಚಳ ಸಿಪಿಐಎಂ ತೀವ್ರ ಆಕ್ರೋಶ: ಹೋರಾಟಕ್ಕೆ ನಿರ್ಧಾರ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಅವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಮೂಲಕ ಜನಸಾಮಾನ್ಯರನ್ನು ಹಗಲು ದರೋಡೆ ನಡೆಸುತ್ತಿದೆ. ಮೂರು ವರುಷಗಳಿಗೊಮ್ಮೆ ತೆರಿಗೆಯನ್ನು ಪರಿಷ್ಕೃತಗೊಳಿಸಲಿರುವ ಅವಕಾಶಗಳನ್ನು ಕೈಬಿಟ್ಟು ಪ್ರತೀ ವರ್ಷ ಶೇ.೩ರಷ್ಟು ಏರಿಸಲು ಮಾತ್ರ ಬಳಸಿಕೊಳ್ಳುತ್ತಿರುವುದು ತೀರಾ ಖಂಡನೀಯ ಎಂದು ಸಿಪಿಎಂ ಮಂಗಳೂರು ನಗರ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಜನರಿಂದ ಬೇಕಾಬಿಟ್ಟಿ ಸಂಗ್ರಹಿಸುವ ತೆರಿಗೆಯ ಹಣವು ನಗರದ ಅಭಿವೃದ್ಧಿಗೆ ಬಳಕೆಯಾಗದೆ ಕೇವಲ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸಂಶಯ ಜನರಲ್ಲಿ ಮನೆಮಾಡಿದೆ. ಕೂಡಲೇ ಪಾಲಿಕೆ ಬಿಜೆಪಿ ಆಡಳಿತವು ಹೆಚ್ಚಳ ಗೊಂಡಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕೂಡಲೇ ಇಳಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಸಿಪಿಎಂ ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ಸಮಿತಿಯು ಮನಪಾ ಆಡಳಿತಕ್ಕೆ ಎಚ್ಚರಿಕೆ ನೀಡಿದೆ.
ಮಂಗಳೂರಿನ ಅಭಿವೃದ್ಧಿಗೆ ಎಡಿಬಿಯಿಂದ ಪಡೆದ 360 ಕೋ.ರೂ. ಮೊದಲ ಹಂತದ ಸಾಲದಲ್ಲಿ ಕುಡ್ಸೆಂಪ್ ಯೋಜನೆಯಡಿ ನಡೆಸಿದ ಒಳಚರಂಡಿ ನಿರ್ಮಾಣ ಸಂಪೂರ್ಣ ವೈಫಲ್ಯ ಕಂಡು ಈವರೆಗೂ ಪೂರ್ಣಗೊಳಿಸಲು ಸಾಧ್ಯ ವಾಗಿಲ್ಲ. ಅವುಗಳನ್ನು ಸರಿಪಡಿಸಲು ಮತ್ತು ನೀರು ಸರಬರಾಜಿನ ಜಲಸಿರಿ ಯೋಜನೆಗಳಿಗೆ ಸೇರಿ ಮತ್ತೆ ಎರಡನೇ ಹಂತದಲ್ಲಿ ಎಡಿಬಿಯಿಂದ ಪಡೆದ 780 ಕೋ.ರೂ.ನಲ್ಲೂ ಸರಿಯಾದ ಕಣ್ಣೋಟಗಳಿಲ್ಲದೆ ಅವೈಜ್ಞಾನಿಕ ರೀತಿಯ ಕಾಮಗಾರಿ ಸಹಿತ ಬೇಕಾಬಿಟ್ಟಿ ಹಣವನ್ನು ಪೋಲು ಮಾಡಲಾಗುತ್ತಿದೆ. ಎಡಿಬಿಯಿಂದ ಪಡೆದ ಇಷ್ಟೆಲ್ಲಾ ಸಾಲದ ಹಣವನ್ನು ತೀರಿಸಲು ಸ್ವಯಂ ಘೋಷಿತ ಆಸ್ತಿ ತೆರಿಗೆಯ ರೂಪದಲ್ಲಿ ನಗರದ ಜನಸಾಮಾನ್ಯರ ಮೇಲೆ ಸಾಲದ ಹೊರೆ ಹೊರಿಸಿ ವಿಪರೀತ ಪ್ರಮಾಣದ ತೆರಿಗೆ ಸಂಗ್ರಹಿಸಲಾಗುತ್ತಿರುವುದು ಜನವಿರೋಧಿ ನಡೆಯಾಗಿದೆ. ಮಂಗಳೂರು ನಗರ ಪಾಲಿಕೆ ಹೊರತು ಪಡಿಸಿ ರಾಜ್ಯದ ಬೇರೆಲ್ಲೂ ಇಷ್ಟೊಂದು ಪ್ರಮಾಣದ ಅದರಲ್ಲೂ ಎರಡೆರಡು ಬಗೆಯ ತೆರಿಗೆಗಳನ್ನು ಸಂಗ್ರಹಿಸ ಲಾಗುತ್ತಿಲ್ಲ. ಇಲ್ಲಿ ಮಾತ್ರ ಆಸ್ತಿ ತೆರಿಗೆ ಸೇರಿ ಕಸ ವಿಲೇವಾರಿಯಲ್ಲೂ ಸೆಸ್ ರೂಪದ ತೆರಿಗೆಗಳನ್ನು ಸಂಗ್ರಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಿಪಿಎಂ ಆಕ್ರೋಶ ವ್ಯಕ್ತಪಡಿಸಿದೆ
ಕಸ ವಿಲೇವಾರಿಯನ್ನು ಆಂಟೊನಿ ವೇಸ್ಟ್ ಕಂಪೆನಿಯಿಂದ ಗುತ್ತಿಗೆ ಹಿಂಪಡೆದ ನಂತರ ಇತ್ತೀಚೆಗೆ ಸ್ವಚ್ಚ ಭಾರತ ಯೋಜನೆ ಯಡಿ ಕಸ ಸಂಗ್ರಹದ ವಾಹನ ಖರೀದಿಗೆ 27.75 ಕೋ.ರೂ. ಸಹಾಯ ನಿಧಿಯು ಪಾಲಿಕೆಗೆ ಮಂಜೂರಾಗಿದೆ. ಸುಮಾರು 750 ಗ್ರೂಪ್ ಡಿ ನೌಕರರೂ (ಪೌರ ಕಾರ್ಮಿಕರು) ನೇಮಕಾತಿಗೊಳಿಸಲಾಗಿದೆ. ಇಷ್ಟೆಲ್ಲಾ ಜನರ ತೆರಿಗೆ ಹಣದಿಂದ ಹರಿದು ಬಂದ ಸಹಾಯ ನಿಧಿಯನ್ನು ನಗರದ ಜನರಿಗೆ ಯಾವ ರೀತಿ ಲಾಭ ಮಾಡಿಕೊಡಲಾಗಿದೆ ಎಂದು ಪಾಲಿಕೆ ಆಡಳಿತ ಉತ್ತರಿಸಬೇಕು. ಇನ್ನು ಸ್ಮಾರ್ಟ್ ಸಿಟಿ ಸಾವಿರಾರು ಕೋ.ರೂ.ವನ್ನು ಕೇವಲ 8 ವಾರ್ಡ್ಗಳ ಅಭಿವೃದ್ಧಿಗೆ ಮೀಸಲಿರಿಸಿ ಯಾವುದೇ ಅಭಿವೃದ್ದಿ ಕಾಣದ ಬಾಕಿ ಉಳಿದ 52 ವಾರ್ಡ್ಗಳ ಜನರಿಂದ ವಿಪರೀತ ಪ್ರಮಾಣದ ತೆರಿಗೆ ಸಂಗ್ರಹಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದೆ.
ಹಾಗಾಗಿ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತ ಈ ಕೂಡಲೇ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪರಿಷ್ಕೃತಗೊಳಿಸಿ ಇಳಿಸಲು ಕ್ರಮಕೈಗೊಳ್ಳಬೇಕು. ಕಸ ವಿಲೇವಾರಿ ಸೆಸ್ ಸಹಿತ ಇತರೆ ತೆರಿಗೆಗಳನ್ನು ರದ್ದುಗೊಳಿಸ ಬೇಕು. ಅವೈಜ್ಞಾನಿಕ ರೀತಿಯಲ್ಲಿ ವಿಧಿಸುತ್ತಿರುವ ತೆರಿಗೆಯನ್ನು ಸರಿಪಡಿಸಬೇಕೆಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ಕಾರ್ಯದರ್ಶಿಗಳಾದ ಸಂತೋಷ್ ಬಜಾಲ್ ಹಾಗೂ ಪ್ರಮೀಳಾ ಶಕ್ತಿನಗರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.