.jpeg)
Mangalore: ಕಾಂಗ್ರೆಸ್ ದುರಾಡಳಿತದ ಪರಮಾವಧಿ: ಕ್ಯಾ.ಬ್ರಿಜೇಶ್ ಚೌಟ
ಮಂಗಳೂರು: ಸಾರ್ವಜನಿಕ ರಸ್ತೆಯಲ್ಲಿ ನಮಾಝ್ ಮಾಡಿ ವಾಹನ ಹಾಗೂ ಜನಸಂಚಾರಕ್ಕೆ ಅಡ್ಡಿಪಡಿಸಿದರೂ ಆ ಕೇಸಿಗೆ ಬಿ ರಿಪೋರ್ಟ್ ಹಾಕಿದ ಪೊಲೀಸರು, ನಮಾಜ್ ಘಟನೆ ಬಗ್ಗೆ ಪ್ರಶ್ನೆ ಮಾಡಿದ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ತಾರತಮ್ಯದ ಘಟನೆ ನಡೆದಿರುವುದು ಕಾಂಗ್ರೆಸಿನ ದುರಾಡಳಿತದ ಪರಮಾವಧಿಗೆ ಸಾಕ್ಷಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ ಟೀಕಿಸಿದ್ದಾರೆ.
ಜನ ಸಂಚಾರಕ್ಕೆ ತೊಂದರೆಪಡಿಸಿ ನಮಾಜ್ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ವಯಂ ಆಗಿಯೇ ಪ್ರಕರಣ ದಾಖಲಿಸಿದ್ದರು. ಆದರೆ, ಇದರಿಂದ ಅಲ್ಪಸಂಖ್ಯಾತರಿಗೆ ನೋವಾಯ್ತು ಎನ್ನುವ ಕಾರಣವೊಡ್ಡಿ ಕಾಂಗ್ರೆಸ್ ನಾಯಕರು ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಿ ಕೇಸನ್ನೇ ಹಿಂಪಡೆಯುವಂತೆ ಮಾಡಿದ್ದು ವಿಪರ್ಯಾಸ.
ಅಲ್ಲದೆ, ಸುಮೋಟೊ ಪ್ರಕರಣ ದಾಖಲಿಸಿದ ಪೊಲೀಸ್ ಅಧಿಕಾರಿಯನ್ನು ರಜೆಯಲ್ಲಿ ಕಳುಹಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಪೊಲೀಸರ ಮನೋಸ್ಥೈರ್ಯವನ್ನೇ ಕುಗ್ಗಿಸುವಂತೆ ಮಾಡಿದೆ. ಇದಲ್ಲದೆ, ನಮಾಜ್ ಘಟನೆ ಮುಂದುವರಿದರೆ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆ ಎಂದ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪುವೆಲ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿ ಅಲ್ಪಸಂಖ್ಯಾತರನ್ನು ಖುಷಿಪಡಿಸುವ ಕೆಲಸ ಮಾಡಿದ್ದಾರೆ. ಆಮೂಲಕ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಹೊರಟಂತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಪೋಲಿಸ್ ಇಲಾಖೆಗೆ ಸ್ವಾತಂತ್ರ್ಯ ಇಲ್ಲದಾಗಿದೆ. ಪೊಲೀಸರು ತಮ್ಮ ಕರ್ತವ್ಯ ಪಾಲನೆ ಮಾಡುವುದಕ್ಕೂ ಕಾಂಗ್ರೆಸ್ ನಾಯಕರ ಅನುಮತಿ ಪಡೆದು ಮುಂದುವರಿಯುವ ಸ್ಥಿತಿಯಾಗಿದೆ. ಇಂತಹ ಬೆಳವಣಿಗೆಯಿಂದ ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಿ ಸಾಮಾಜಿಕ ಅಶಾಂತಿ ನಿರ್ಮಾಣಕ್ಕೆ ಕಾರಣವಾಗಿದೆ. ಪೊಲೀಸರನ್ನೂ ಹಿಂದು ಸಂಘಟನೆಗಳ ಮೇಲೆ ಎತ್ತಿಕಟ್ಟಿ ಸಾಮರಸ್ಯಕ್ಕೆ ಕೊಳ್ಳಿಯಿಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರವೇ ಮಾಡಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.