
Putturu: ಮೊಟ್ಟೆಗೆ ಕೃತಕ ಕಾವು-25ಕ್ಕೂ ಹೆಚ್ಚು ಹೆಬ್ಬಾವು ಮರಿಗಳ ರಕ್ಷಣೆ: ಪುತ್ತೂರಿನ ಯುವಕ ಸ್ನೇಕ್ ತೇಜಸ್ನ ಉರಗಪ್ರೇಮ
ಪುತ್ತೂರು: ಯುವ ಉರಗಪ್ರೇಮಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ತೇಜಸ್ ಬನ್ನೂರು 25ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ರಕ್ಷಿಸಿ ಜಿಲ್ಲೆಯ ಬೇರೆ ಬೇರೆ ಅರಣ್ಯಕ್ಕೆ ಬಿಡುವ ಮೂಲಕ ತನ್ನ ಉರಗಪ್ರೇಮವನ್ನು ಮೆರೆದಿದ್ಧಾರೆ. ಕಳೆದ ಐದಾರು ವರ್ಷಗಳಿಂದ ಸಂಕಷ್ಟದಲ್ಲಿರುವ ಉರಗ ಸಂತಾನವನ್ನು ರಕ್ಷಿಸಿ, ಅವುಗಳನ್ನು ಮತ್ತೆ ಪ್ರಕೃತಿಗೆ ನೀಡುವ ಕಾರ್ಯವನ್ನು ನಡೆಸುತ್ತಿದ್ದಾರೆ. ಈವರೆಗೆ ಸುಮಾರು 100 ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ಕಾಡಿಗೆ ಬಿಟ್ಟು ಹೆಬ್ಬಾವುಗಳ ಸಂತತಿಯನ್ನು ರಕ್ಷಿಸಿದ್ದಾರೆ.
ಹೆಚ್ಚಾಗಿ ಮರದ ಪೊಟರೆಯೊಳಗೆ, ಬಿದ್ದ ತೆಂಗಿನ ಮರದ ಟೊಳ್ಳಾದ ಭಾಗದಲ್ಲಿ ಹೆಬ್ಬಾವುಗಳು ಮೊಟ್ಟಗಳನ್ನು ಇಡುತ್ತವೆ. ಸುಮಾರು 60 ದಿನಗಳ ಕಾಲ ಹೆಬ್ಬಾವುಗಳು ಮರಿಗಳಿಗೆ ಕಾವನ್ನು ನೀಡುತ್ತದೆ. ಹಾವುಗಳಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಮಾತ್ರ ತಮ್ಮ ಮೊಟ್ಟೆಗಳಿಗೆ ಕಾವು ನೀಡುವ ಮೂಲಕ ಮರಿಗಳನ್ನು ಹೊರ ತರುತ್ತದೆ. ಮಾನವ ಅಥವಾ ಇತರ ಪ್ರಾಣಿಗಳಿಂದ ತೊಂದರೆಯಾದಾಗ ಮಾತ್ರ ಹೆಬ್ಬಾವು ಮತ್ತು ಕಾಳಿಂಗ ಸರ್ಪ ತಮ್ಮ ಮೊಟ್ಟೆಗಳನ್ನು ಬಿಟ್ಟು ಬೇರೆಡೆ ಸಾಗುತ್ತದೆ. ಇಂತಹ ಸಂದರ್ಭದಲ್ಲಿ ಮೊಟ್ಟೆಗಳು ಕಾವಿಲ್ಲದೆ ಹಾಳಾಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತದೆ.
ಹೀಗೆ ಹಾವುಗಳಿಲ್ಲದೆ ಅನಾಥವಾಗಿರುವ ಇಂಥಹ ಮೊಟ್ಟೆಗಳನ್ನು ಶ್ರೇಯಸ್ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ತಮ್ಮ ಮನೆಗೆ ಕೊಂಡೊಯ್ದು ಅವುಗಳಿಗೆ ಕೃತಕ ಕಾವನ್ನು ನೀಡುವ ವ್ಯವಸ್ಥೆ ಮಾಡುತ್ತಾರೆ. ಇದೇ ರೀತಿ ಈ ಬಾರಿ ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ಸಂಗ್ರಹಿಸಿದ 12 ಮತ್ತು ಕನ್ಯಾನದಲ್ಲಿ ಸಂಗ್ರಹಿಸಿ 13 ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಮರಿ ಮಾಡುವ ಮೂಲಕ ಜಿಲ್ಲೆಯ ವಿವಿಧ ಕಾಡುಗಳಿಗೆ ಬಿಟ್ಟಿದ್ದಾರೆ ಹೆಬ್ಬಾವುಗಳು ಮರದ ಪೊಟರೆಯೊಳಗೆ ಮೊಟ್ಟೆ ಇಟ್ಟರೆ, ಕಾಳಿಂಗ ಸರ್ಪ ಮೊಟ್ಟೆ ಇಡುವ ಮತ್ತು ಅವುಗಳಿಗೆ ಕಾವು ನೀಡುವ ವಿಧಾನವೇ ಬೇರೆಯಾಗಿದೆ.
ಮೊಟ್ಟೆ ಇಟ್ಟ ಬಳಿಕ ಈ ಮೊಟ್ಟೆಗಳಿಗೆ ಸರಿಯಾದ ಉಷ್ಣಂಶವನ್ನು ಕಾಯ್ದುಕೊಳ್ಳಲು ಕಾಳಿಂಗ ಸರ್ಪ ತನ್ನ ಬಾಲದ ಸಹಾಯದಿಂದಲೇ ಎಲೆಗಳನ್ನು ಜೋಡಿಸಿ ಸುಮಾರು 1 ಮೀಟರ್ ಎತ್ತರದಲ್ಲಿ ಗೂಡಿನ ರೀತಿಯನ್ನು ಕಟ್ಟುತ್ತದೆ. ಈ ಗೂಡಿನೊಳಗಿರುವ ಮೊಟ್ಟೆಗಳಿಗೆ ಸರಿಯಾಗಿ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುವಂತೆ ಈ ಹಾವು ನೋಡಿಕೊಳ್ಳುತ್ತದೆ. ಮಳೆಗಾಲದಲ್ಲಿ ಎಲೆಗಳನ್ನು ಕಡಿಮೆ ಹಾಕಿ ಉಷ್ಣಾಂಶ ಕಾಯ್ದುಕೊಂಡರೆ, ಬೇಸಿಗೆ ಕಾಲದಲ್ಲಿ ಗೂಡಿನ ಮೇಲೆ ಎಲೆಗಳನ್ನು ಜಾಸ್ತಿ ಹಾಕಿ ಗೂಡಿನ ಉಷ್ಣಾಂಶವನ್ನು ಕಾಯ್ದುಕೊಳ್ಳುತ್ತದೆ. ಹೆಚ್ಚಾಗಿ ಈ ಗೂಡಿನ ಮೇಲೆ ತಾಯಿ ಕಾಳಿಂಗ ಸರ್ಪಗಳು 60 ದಿನಗಳ ಕಾಲ ಕಾವು ನೀಡುತ್ತದೆ. ಕೆಲವೊಮ್ಮೆ ಜನ ಈ ರೀತಿ ಗೂಡಿನ ಮೇಲೆ ಕುಳಿತ ಹಾವನ್ನು ನೋಡಿ ನಿಧಿಯನ್ನು ಕಾಯುತ್ತಿದೆ ಎಂದು ನಂಬುತ್ತಾರೆ. ಕಾಳಿಂಗ ಸರ್ಪ ಮತ್ತು ಹೆಬ್ಬಾವುಗಳಿಗೆ ಮರಿಗಳು ಮೊಟ್ಟೆಯೊಳಗಿಂದ ಬರುವ ಸಮಯ ಮೊಟ್ಟೆಯೊಳಗಿಂದ ಹೊರಹೊಮ್ಮುವ ವಾಸನೆಯಿಂದ ತಿಳಿದು ಬರುತ್ತದೆ. ಇದೇ ಸಂದರ್ಭದಲ್ಲಿ ಹಾವುಗಳು ಮೊಟ್ಟೆಗಳನ್ನು ಬಿಟ್ಟು ತೆರಳುತ್ತಿದೆ ಎನ್ನುತ್ತಾರೆ ತೇಜಸ್.