
Putturu: ಪಿಯು ಅತಿಥಿ ಉಪನ್ಯಾಸಕರಿಗೆ ಬಿಇಡಿ ಕಡ್ಡಾಯ ಆದೇಶ ರದ್ದುಗೊಳಿಸುವಂತೆ ಶಾಸಕರಿಗೆ ಮನವಿ
ಪುತ್ತೂರು: ಪಿಯು ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವಲ್ಲಿ ಬಿಇಡಿ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದು ಈ ಸುತ್ತೋಲೆಯನ್ನು ರದ್ದು ಮಾಡುವಂತೆ ಪುತ್ತೂರು ಶಾಸಕರಿಗೆ ಉಪನ್ಯಾಸಕರು ಮನವಿ ಮಾಡಿದ್ದಾರೆ.
ಈಗಾಗಲೇ ಪಿಜಿ ಪದವೀಧರರು ಅತಿಥಿ ಉಪನ್ಯಾಸಕರಾಗಿ ಕರ್ತವ್ಯದಲ್ಲಿದ್ದಾರೆ. ಹಲವು ವರ್ಷಗಳಿಂದ ಉಪನ್ಯಾಸವನ್ನು ಮಾಡುತ್ತಿದ್ದಾರೆ. ಇವರು ಮುಂದಿನ ದಿನಗಳಲ್ಲಿ ಉಪನ್ಯಾಸಕರಾಗಿ ಮುಂದುವರೆಯಬೇಕಾದಲ್ಲಿ ಬಿಇಡಿ ಕಡ್ಡಾಯವಾಗಿ ಮಾಡಬೇಕು ಎಂದು ಶಿಕ್ಷಣ ಇಲಾಖೆಯ ಆದೇಶವಾಗಿದೆ. ಈ ಆದೇಶ ಜಾರಿಯಾದಲ್ಲಿ ಹಲವು ಮಂದಿ ಉಪನ್ಯಾಸಕರು ಕೆಲಸವನ್ನು ಕಳೆದುಕೊಳ್ಳಲಿದ್ದೇವೆ. ಅತಿಥಿ ಉಪನ್ಯಾಸಕರನ್ನು ನೇಮಕಾತಿ ವೇಳೆ ಸ್ನಾತಕೋತ್ತರ ಪದವಿಯನ್ನು ಮಾನ್ಯ ಮಾಡಲಾಗಿತ್ತು ಆದರೆ ಇದೀಗ ಹೊಸ ಕಾನೂನು ನಮಗೆ ಸಂಕಷ್ಟವನ್ನು ತಂದೊಡ್ಡಿದೆ ಎಂದು ಶಿಕ್ಷಕರು ಶಾಸಕರಾದ ಅಶೋಕ್ ರೈಯವರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಎರಡು ವರ್ಷದ ಅವಧಿ ಕೊಡಿ:
ನಮಗೆ ಉಪನ್ಯಾಸದ ಜೊತೆಗೆ ಬಿಇಡಿ ವ್ಯಾಸಂಗ ಮಾಡಲು ಎರಡು ವರ್ಷದ ಕಾಲವಕಾಶ ನೀಡಬೇಕು. ಎರಡು ವರ್ಷದ ಕಾಲವಕಾಶ ನೀಡಿದ್ದಲ್ಲಿ ನಾವು ಬಿಇಡಿ ವ್ಯಾಸಂಗವನ್ನು ಪೂರ್ಣಗೊಳಿಸುವುದಾಗಿ ಅತಿಥಿ ಉಪನ್ಯಾಸಕರು ಶಾಸಕರಲ್ಲಿ ಮನವಿ ಮಾಡಿದ್ದು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ತಿಳಿಸಬೇಕೆಂದು ಶಿಕ್ಷಕು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉಪನ್ಯಾಕರಾದ ತನುಜಾಕ್ಷಿ ಶೆಟ್ಟಿ, ಪ್ರಜ್ಞಾ, ಸಾಧನಾ, ಶೋಭಿತಾ, ಅಕ್ಷತಾ, ನವ್ಯಶ್ರೀ, ಜ್ಯೋತಿ, ಮಮತಾ, ಸಹನಾ, ಆಯಿಷತ್ ಮರ್ವ, ಮಹಮ್ಮದ್ ಜುಬೈರ್, ಪ್ರಸಾದ್, ತುಷಾರ, ಶ್ರುತಿ,ಅಶ್ವಿತಾ, ಉಷಾ, ಚಂಧ್ರಿಕಾ, ಯೋಗೀಶ್ವರಿ, ದಿವ್ಯ ಬೇಬಿ, ಮತ್ತು ದೀಕ್ಷಿತಾ ಉಪಸ್ಥಿತರಿದ್ದರು.
ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ: ಅಶೋಕ್ ರೈ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಈ ಬಗ್ಗೆ ಮಾತುಕತೆ ನಡೆಸಿ ಈಗಾಗಲೇ ಕರ್ತವ್ಯದಲ್ಲಿರುವ ಅತಿಥಿ ಉಪನ್ಯಾಸಕರಿಗೆ ತೊಂದರೆಯಾಗಬಾರದು ಮತ್ತು ಹೊಸ ಆದೇಶದ ಬಗ್ಗೆ ಪರಿಶೀಲನೆ ಮಾಡುವಂತೆಯೂ ಸಚಿವರಿಗೆ ಮನವಿ ಮಾಡಿದ್ದೇನೆ. ಹೊಸ ಆದೇಶದ ಬಗ್ಗೆ ಪರಿಶೀಲನೆ ಮಾಡುತ್ತೇನೆ ಮತ್ತು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ತಿಳಿಸಿದ್ದಾರೆ.