
Ullal: ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಶೀಲಾನ್ಯಾಸ
ಉಳ್ಳಾಲ: ಮುಂದಿನ ಐದು ವರ್ಷಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ನನ್ನ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಕಳೆದ ಅವಧಿಯಲ್ಲಿ ಕೊಟ್ಟ ಭರವಸೆಯಂತೆ ದಿನದ 24ಗಂಟೆಯೂ ಕುಡಿಯುವ ನೀರು ಕೊಡುವಂತಹ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ, ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಹೇಳಿದರು.
ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 18ಲಕ್ಷ ಲೀ. ನೀರು ಶೇಖರಣ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣಕ್ಕೆ ಭಾನುವಾರ ಬಗಂಬಿಲ ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ನೀರಿನ ವ್ಯವಸ್ಥೆಗೆ ಎರಡನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿ 300ಕೋಟಿ ರೂ. ಅನುದಾನ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ್ದಾರೆ. 18 ಲಕ್ಷ ಲೀಟರ್ ನೀರಿನ ಟ್ಯಾಂಕ್ ಆಗಲಿದ್ದು, ನೀರು ತುಂಬೆಯಿಂದ ಕೊಣಾಜೆಗೆ ಸರಬರಾಜು ಮಾಡಿ ಅಲ್ಲಿಂದ ಶುದ್ಧಿಗೊಂಡು ಸೋಮೇಶ್ವರಕ್ಕೆ ಸರಬರಾಜು ಆಗಲಿದೆ. ಯೋಜನೆಗೆ ಶಿಲಾನ್ಯಾಸ ನಡೆದ ದಿನ ಇತಿಹಾಸದ ಪುಸ್ತಕದಲ್ಲಿ ಬರೆದಿಡುವಂತದ್ದು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಯೋಜನೆಗೆ ಮುಖ್ಯಮಂತ್ರಿಯೇ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಮೂಡಾದ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಸೋಮೇಶ್ವರ ಪುರಸಭಾ ಸದಸ್ಯರಾದ ಮಾಲತಿ, ಜಯಣ್ಣ, ಮೋಹನ್ ಶೆಟ್ಟಿ, ಕೊಣಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೌಕತ್ ಆಲಿ, ಮುಖಂಡರಾದ ನವೀನ್ ಬಗಂಬಿಲ, ರಹ್ಮಾನ್ ಕೋಡಿಜಾಲ್, ಸಲಾಂ ಉಚ್ಚಿಲ್, ಪುರುಷೋತ್ತಮ ಶೆಟ್ಟಿ, ಮನ್ಸೂರ್ ಮಂಚಿಲ ಉಪಸ್ಥಿತರಿದ್ದರು.
ಜಿಲ್ಲಾ ಮುಖಂಡ ದಿನೇಶ್ ಕುಂಪಲ ಪ್ರಾಸ್ತಾವಿಕವಾಗಿ ಮಾತನಾಡಿದರು.