ಪೊಳಲಿ ಚೆಂಡಿನ ಗದ್ದೆಯಲ್ಲಿ ಯಾಂತ್ರೀಕೃತ ಭತ್ತ ನಾಟಿಗೆ ಚಾಲನೆ
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿ ಸುಮಾರು 2.50 ಎಕರೆ ಗದ್ದೆಯಲ್ಲಿ ಐದನೇ ವರ್ಷದ ಭದ್ರತಳಿಯ ಯಾಂತ್ರೀಕೃತ ಭತ್ತ ನಾಟಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಯಂತ್ರದ ಮೂಲಕ ನೇಜಿ ನಾಟಿಗೈದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕೃಷಿ ಇಲಾಖೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಭತ್ತದ ಕೃಷಿ ನಾಟಿಯನ್ನು ಮಾಡಲಾಗಿದೆ. ಕಳೆದ ಬಾರಿ ಮಾಡಲಾದ ಕೃಷಿಯಿಂದ 95 ಸಾವಿರದಷ್ಟು ದೇವಸ್ಥಾನಕ್ಕೆ ಉಳಿತಾಯವಾಗಿದ್ದು, ಇದರ ಹುಲ್ಲು ಸ್ಥಳೀಯ ಕೃಷಿಕರಿಗೆ ಉಪಯೋಗವಾಗಿದೆ ಎಂದು ತಿಳಿಸಿದರು.
ಭತ್ತದ ಕೃಷಿಯಿಂದ ಹೆಕ್ಟೇರ್ ಗೆ 80 ಸಾವಿರ ರೂ. ಲಾಭ ಗಳಿಸುವುದು ಉತ್ತಮ ಆದಾಯವಾಗಿದೆ ಎಂದು ಹೇಳಿದ ಶಾಸಕ ರಾಜೇಶ್ ನಾಯ್ಕ್ ಭತ್ತದ ಕೃಷಿ ಲಾಭದಾಯಕ ಕೃಷಿ ಎಂಬುದನ್ನು ಸೂಚಿಸಿದೆಯಲ್ಲದೆ ಇನ್ನಷ್ಟು ಭತ್ತದ ಕೃಷಿ ಚಟುವಟಿಕೆಗೆ ಪ್ರೇರಣೆ ನೀಡಿದಂತಾಗಿದೆ ಎಂದರು.
ಇದೇ ವೇಳೆ ಮೂವರು ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು. ಸ್ಥಳೀಯ ಪ್ರಮುಖರಾದ ವೆಂಕಟೇಶ ನಾವಡ ಪೊಳಲಿ, ಸುಕೇಶ್ ಚೌಟ, ಕಾರ್ತಿಕ್ ಬಲ್ಲಾಳ್, ಚಂದ್ರಶೇಖರ್ ಶೆಟ್ಟಿ, ಯಶವಂತ ಪೊಳಲಿ, ಚಂದ್ರಾವತಿ ಪೊಳಲಿ, ಯಶೋಧ ಕಲ್ಕುಟ್ಟ, ಲೋಕೇಶ್ ಭರಣಿ, ನವೀನ ಕಟ್ಟಪುಣಿ, ಬಿಜೆಪಿ ಬಂಟ್ವಾಳ ಮಂಡಲದ ಪ್ರ. ಕಾರ್ಯದರ್ಶಿ ಸುದರ್ಶನ ಬಜ, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಉಪನಿರ್ದೇಶಕಿ ಕುಮುದ, ಸಹಾಯಕ ಕೃಷಿ ನಿರ್ದೇಶಕಿ ವೀಣಾ, ಕೃಷಿ ಅಧಿಕಾರಿ ನಂದನ್ ಶೆಣೈ, ತಾಂತ್ರಿಕ ಅಧಿಕಾರಿ ಹನುಮಂತ ಕಾಳಗಿ ಉಪಸ್ಥಿತರಿದ್ದರು.