Mangalore: ಷೇರು ಖರೀದಿ-1.50 ಕೋಟಿ ವಂಚನೆ
Wednesday, July 17, 2024
ಮಂಗಳೂರು: ನಗರದ ನಿವಾಸಿಯೊಬ್ಬರು ಷೇರು ಖರೀದಿಸಿ ಲಾಭಗಳಿಸುವ ಉದ್ದೇಶದಲ್ಲಿ 1.50 ಕೋಟಿ ರೂ. ಕಳೆದುಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಹಣ ಕಳೆದುಕೊಂಡ ವ್ಯಕ್ತಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನೋಡುವಾಗ 'Jefferies wealth multiplication Plan' ಎಂಬ ಪೋಸ್ಟ್ ನೋಡಿ ಅದರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದರು.
ಷೇರ್ಗಳನ್ನು ಖರೀದಿಸಿ ಲಾಭ ಗಳಿಸುವ ಇರಾದೆಯಿಂದ ಅಪರಿಚಿತ ವ್ಯಕ್ತಿಯು ನೀಡಿದ ಮಾಹಿತಿಯಂತೆ ಇವರು ಮೇ.28 ರಿಂದ ಜೂ.28ರ ತನಕ ಹಂತ ಹಂತವಾಗಿ ತಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲ್ಲಿಕಟ್ಟೆ ಶಾಖೆಯಿಂದ 73,00,000 ರೂ. ಮತ್ತು ಗುರುಪುರ ವ್ಯವಸಾಯ ಸಹಕಾರಿ ಸಂಘ ನಿಯಮಿತ ವಾಮಂಜೂರು ಶಾಖೆ ಖಾತೆಯಿಂದ 77,00,000 ರೂ. ಒಟ್ಟು 1.50 ಕೋಟಿ ರೂ.ಗಳನ್ನು ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.