ರಾಮರಾಜ್ಯ ಸಾಧನೆ ಮಾಡುವುದರ ಜೊತೆಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ: ಚಂದ್ರ ಮೊಗೇರ
ಮಂಗಳೂರು: ವೈಯಕ್ತಿಕ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಬಹುದು, ಆದರೆ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ನಾವು ಕರ್ತವ್ಯನಿಷ್ಠರಾಗಿ ನಿಭಾಯಿಸುವುದರೊಂದಿಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗೇರ ಹೇಳಿದರು.
ಜು.21 ರಂದು ನಗರದ ಟಿ.ವಿ ರಮಣ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ಗುರುಪೂರ್ಣಿಮಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು. ‘ಹಲೋ’ ಬದಲಾಗಿ ‘ನಮಸ್ಕಾರ’ ಅಥವಾ ‘ರಾಮ ರಾಮ’ ಹೇಳಬೇಕು, ಇದು ನಮ್ಮ ಸಂಸ್ಕೃತಿಯಾಗಿದೆ. ‘ಟಿವಿ’ಯಲ್ಲಿ ಧಾರಾವಾಹಿ ನೋಡದೆ, ‘ಕೀರ್ತನೆ-ಭಜನೆ’ ನೋಡಬೇಕು, ಇದು ನಮ್ಮ ಸಂಸ್ಕೃತಿಯಾಗಿದೆ, ಯಾರೋ ನಟನಲ್ಲ, ‘ರಾಮ-ಕೃಷ್ಣ’ ನಮ್ಮ ಆದರ್ಶವಾಗಿದ್ದಾರೆ. ದಿನನಿತ್ಯದ ಜೀವನದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕೆಂದು ಹೇಳಿದರು.
ನಿರಂತರ ಗುರುಭಕ್ತಿಯೇ ನಮ್ಮನ್ನು ಮೋಕ್ಷದೆಡೆಗೆ ಕೊಂಡೊಯ್ಯುತ್ತದೆ:
ನ್ಯಾಯವಾದಿ ಕೃಷ್ಣಮೂರ್ತಿ ಮಾತನಾಡಿ, ನಮ್ಮಲ್ಲಿರುವ ದೋಷಗಳನ್ನು ಕಡಿಮೆ ಮಾಡಿ, ಸಂಸಾರದ ಬಂಧನದಿಂದ ಹೊರತೆಗೆದು, ನಾಲಿಗೆಯಲ್ಲಿ ಹರಿ ನಾಮ ಸಂಕೀರ್ತನೆಯನ್ನು ಹಾಡಿಸಿ, ತನು-ಮನ-ಧನದ ತ್ಯಾಗವನ್ನು ಮಾಡಿಸುವ ಭಗವಂತ ರೂಪಿ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತ ಪಡಿಸಬೇಕು ಎಂದು ಹೇಳಿದರು.
ಜಿಲ್ಲೆಯ ಬಿ.ಸಿ.ರೋಡ್, ಉಜಿರೆ ಮತ್ತು ದೇಶದಾದ್ಯಂತ ೭೧ ಸ್ಥಳಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಿತ್ತು. ಈ ಮಹೋತ್ಸವದಲ್ಲಿ ಉದ್ಯಮಿಗಳಾದ ಮಧುಸೂಧನ್ ಅಯಾರ್, ಎಂ.ಜೆ. ಶೆಟ್ಟಿ, ಶ್ರೀ ಚಂದ್ರಕಾಂತ ಕಾಮತ್, ಡಾ. ಮುರಳೀಧರ್ ಭಟ್, ಡಾ. ರೋಷನ್, ಅನೇಕ ನ್ಯಾಯವಾದಿಗಳು, ಹಿಂದುತ್ವನಿಷ್ಠ ಗಣ್ಯರು ಸಹಭಾಗಿಯಾಗಿದ್ದರು. 300ಕ್ಕೂ ಅಧಿಕ ಜನರು ಭಾಗವಹಿಸಿದ್ದರು.


