Mangalore: ಕುಮಾರಧಾರದಲ್ಲಿ ಆನೆ ಕಳೇಬರ
Tuesday, July 16, 2024
ಮಂಗಳೂರು: ಕರಾವಳಿಯಾದ್ಯಂತ ಕಳೆದ ಎರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಈ ನಡುವೆ ಆನೆಯ ಕಳೇಬರ ನರೆ ನೀರಿಗೆ ನದಿಯಲ್ಲಿ ತೇಲಿಬಂದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದ್ದು, ಸೋಮವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಕುಮಾರಧಾರ ನದಿಯಲ್ಲಿ ನೀರು ಎಷ್ಟಿದೆ ಎಂದು ನೋಡಲು ತೆರಳಿದ ಮನ್ಮಥ ಬಟ್ಟೋಡಿ ಎಂಬವರು ಆನೆಯ ಕಳೇಬರ ನೀರಿನಲ್ಲಿ ತೇಲುತ್ತಿರುವುದು ಕಂಡಿದ್ದಾರೆ. ತಕ್ಷಣವೇ ಅವರು ವೀಡಿಯೋದಲ್ಲಿ ಆನೆಯ ಕಳೇಬರ ತೇಲಾಡುವ ದೃಶ್ಯವನ್ನು ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.