ನಾಪತ್ತೆಯಾದ ಯುವಕ ಗೌರಿಹೊಳೆಯಲ್ಲಿ ಶವವಾಗಿ ಪತ್ತೆ
ಪುತ್ತೂರು: ಮುಕ್ರಂಪಾಡಿಯ ಇಂಡಸ್ಟ್ರೀಯಲ್ ಎಸ್ಟೇಟ್ ಬಳಿಯ ಮಹೀಂದ್ರಾ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಶವ ಗೌರಿ ಹೊಳೆಯಲ್ಲಿ ಭಾನುವಾರ ಪತ್ತೆಯಾಗಿದೆ. ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಚಂದ್ರ ಗೌಡ ಅವರ ಪುತ್ರ ಸನ್ಮಿತ್ (21) ಮೃತಪಟ್ಟ ಯುವಕ.
ಜುಲೈ 19ರ ರಾತ್ರಿ ನಾಪತ್ತೆಯಾಗಿದ್ದ ಈತನನ್ನು ಹುಡುಕಾಡಿದಾಗ ಗೌರಿ ಹೊಳೆ ಸೇತುವೆ ಬಳಿ ಸನ್ಮಿತ್ ಅವರು ಓಡಿಸುತ್ತಿದ್ದ ಡಿಯೋ ಸ್ಕೂಟಿ ಹಾಗೂ ಮೊಬೈಲ್ ಫೋನ್, ಪರ್ಸ್, ಹೆಲ್ಮೆಟ್ ಹಾಗೂ ಟಿಫಿನ್ ಬಾಕ್ಸ್ ಪತ್ತೆಯಾಗಿತ್ತು. ಇದೀಗ ಈ ಸೇತುವೆಯ ಬಳಿಯೇ ನದಿಯಲ್ಲಿ ಈತನ ಶವ ಪತ್ತೆಯಾಗಿದೆ.
ಮನೆಗೆ ಬರಲು ತಡವಾಗುತ್ತದೆ ಎಂದಿದ್ದ..
ಪ್ರತೀ ದಿನ ಸಂಜೆ 6.30ಕ್ಕೆ ಮನೆಗೆ ತಲುಪುತ್ತಿದ್ದ ಸನ್ಮಿತ್ ಜುಲೈ 19ರಂದು ತಂದೆಗೆ ಕರೆ ಮಾಡಿ ನಾನು ಬರುವುದು ಸ್ವಲ್ಪ ತಡವಾಗುತ್ತದೆ ಎಂದಿದ್ದ. 9.30ಕ್ಕೆ ಚಂದ್ರ ಗೌಡ ಅವರು ಮಗನಿಗೆ ಫೋನ್ ಮಾಡಿದಾಗ ಇನ್ನರ್ಧ ಗಂಟೆಯಲ್ಲಿ ಮನೆಯಲ್ಲಿರುತ್ತೇನೆ ಎಂದು ತಿಳಿಸಿದ್ದ. ಆದರೆ ರಾತ್ರಿ 11 ಗಂಟೆಗೆ ಫೋನ್ ಮಾಡಿದಾದ ಆತ ಪೋನ್ ಸ್ವೀಕರಿಸಿರಲಿಲ್ಲ. ರಾತ್ರಿ 1 ಗಂಟೆಗೂ ಮಗ ಬರದಾಗ ಚಂದ್ರ ಗೌಡ ಅವರು ಪರಿಚಯದವರ ಕಾರಿನಲ್ಲಿ ಹುಡುಕಿಕೊಂಡು ಬಂದಾಗ ಗೌರಿಹೊಳೆ ಸೇತುವೆ ಪಕ್ಕ ಮಗನ ಸ್ಕೂಟರ್ ಕಂಡು ಅನುಮಾನಗೊಂಡು ಸಂಪ್ಯ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಈತ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂತೆ ಪರಿಸ್ಥಿತಿ ಈತನಿಗೆ ಇರಲಿಲ್ಲ ಎನ್ನಲಾಗುತ್ತಿದೆ. ಇದೀಗ ಪೊಲೀಸರು ಆತನ ಮೊಬೈಲ್ ವಶಕ್ಕೆ ಪಡೆದು ಈ ಘಟನೆಗೆ ಪ್ರೇಮ ಪ್ರಕರಣ ಏನಾದರೂ ಕಾರಣವೇ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಜನತೆಯಿಂದ ಶಂಕೆ ವ್ಯಕ್ತವಾಗುತ್ತಿದೆ.