
Shakthinagara: ಶಕ್ತಿ ಶಾಲೆಯಲ್ಲಿ ವನಮಹೋತ್ಸವ
ಶಕ್ತಿನಗರ: ಮಂಗಳೂರಿನ ಶಕ್ತಿ ನಗರದಲ್ಲಿರುವ ಶಕ್ತಿ ಪೂರ್ವಪ್ರಾಥಮಿಕ ಶಾಲೆಯಲ್ಲಿ ಜು.೫ ರಂದು ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಶಿಕ್ಷಕರ ಮಾರ್ಗದರ್ಶನದಲ್ಲಿ ವನ ಸಂರಕ್ಷಣೆಯ ಕುರಿತಾದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯನ್ನು ಮಾಡಿ ಜನರಲ್ಲಿ ವನ ಸಂರಕ್ಷಣೆಯ ಜಾಗೃತಿ ಮೂಡಿಸಿದರು.
ಮೆರವಣಿಗೆಯಲ್ಲಿ ಪೇರಳೆ, ನಿಂಬೆ, ನೇರಳೆ ಮತ್ತಿತರ ಗಿಡಗಳನ್ನು ನೆರೆದಿದ್ದ ಸಾರ್ವಜನಿಕರಿಗೆ ಹಾಗೂ ಪೋಷಕರಿಗೆ ವಿತರಿಸಲಾಯಿತು.
ಈ ಸಂದರ್ಭ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮಾತನಾಡಿ, ಕಾಲಕಾಲಕ್ಕೆ ಸರಿಯಾಗಿ ಮಳೆಯಾಗಲು, ನಮಗೆ ಉಸಿರಾಡಲು ಶುದ್ಧ ಗಾಳಿ ಸಿಗಲು, ಹೂವು ಹಣ್ಣು ನೀಡಲು, ನೆರಳು ಕೊಡಲು ಮತ್ತು ಪಕ್ಷಿಗಳಿಗೆ ಗೂಡು ಕಟ್ಟಲು ಮರಗಿಡಗಳು ನಮಗೆ ಬೇಕು. ಆದ್ದರಿಂದ ನಾವೆಲ್ಲಾ ಮರಗಿಡಗಳನ್ನು ನೆಡೋಣ ಎಂದು ಮಕ್ಕಳಿಗೆ ತಿಳಿಹೇಳಿದರು.
ಮಕ್ಕಳಿಂದ ಬೀಜ ಉಂಡೆಗಳ ತಯಾರಿಕೆ ಮಾಡಿರುವುದು ವಿಶೇಷವಾಗಿತ್ತು. ಈ ಉಂಡೆಗಳು, ಬೀಜ ಮತ್ತು ಮಣ್ಣಿನ ಮಿಶ್ರಣವನ್ನು ಒಳಗೊಂಡಿದ್ದು, ಅವನ್ನು ಪಾಲಕರಿಗೆ ವಿತರಿಸಲಾಯಿತು. ಮಕ್ಕಳು ಶಾಲೆಯ ಪರಿಸರದಲ್ಲಿ ಗಿಡಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಮತ್ತು ಪ್ರೀಸ್ಕೂಲ್ ಸಂಯೋಜಕಿ ಸುಷ್ಮಾ ಸತೀಶ್ ಉಪಸ್ಥಿತರಿದ್ದರು.