ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘ ‘ಸ್ಪಟಿಕ’ ಉದ್ಘಾಟನೆ
ಉಜಿರೆ: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘ ‘ಸ್ಪಟಿಕ’ದ ಉದ್ಘಾಟನಾ ಸಮಾರಂಭ ಜು.20ರಂದು ಜರಗಿತು.
ಮುಖ್ಯ ಅತಿಥಿ, ಕೇರಳದ ಕಣ್ಣೂರಿನ ಪಯ್ಯನೂರ್ ಕಾಲೇಜಿನ ರಸಾಯನಶಾಸ್ತ್ರ ಸಂಶೋಧನೆ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಜೇಶ್ ಎ.ಎಂ. ಉದ್ಘಾಟಿಸಿ ಮಾತನಾಡಿ, ವಿಜ್ಞಾನವಿಲ್ಲದೆ ಜೀವನವಿಲ್ಲ, ನಮ್ಮ ಬದುಕಿನಲ್ಲಿ ಪ್ರಮಾಣ ಪತ್ರಕ್ಕಾಗಿ ಓದಬಾರದು, ಪಡೆದುಕೊಂಡ ಜ್ಞಾನವನ್ನು ಬಳಸಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳು ಕೊರೊನಾ ಕಾರಣದಿಂದ ಆನ್ಲೈನ್ ತರಗತಿ ಕೇಳುತ್ತಿದ್ದರು. ಆದರೆ ಅದು ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರಲಿಲ್ಲ. ಸೃಜನಶೀಲತೆ ಹೊರಬರಲು ಅವಕಾಶವಿರಲಿಲ್ಲ. ಇಂದು ವಿದ್ಯಾರ್ಥಿಗಳು ಬೆಳವಣಿಗೆ, ಅವರ ಕ್ರಿಯಾಶೀಲತೆ ನೋಡಿ ಬೆರಗಾಗಿದ್ದೇನೆ” ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಜೀವನದಲ್ಲಿ ಕುತೂಹಲವಿರಬೇಕು. ಪ್ರತಿ ವಿಷಯದಲ್ಲಿ ಇವು ಏಕೆ, ಹೇಗೆ, ಏನು ಎಂಬ ಪ್ರಶ್ನೆ ಉದ್ಭವಿಸಿದಾಗ ಮಾತ್ರ ಹೆಚ್ಚಿನ ಜ್ಞಾನ ಸಿಗುತ್ತದೆ ಎಂದರು.
ಬೆಳಗಿನಿಂದ ರಾತ್ರಿವರೆಗೂ ಅನೇಕ ರಾಸಾಯನಿಕ ವಸ್ತುಗಳ ಬಳಕೆ ಮಾಡುತ್ತೇವೆ. ಹಾಗಾಗಿ ನಮಗೆ ರಾಸಾಯನಿಕದ ಬಗ್ಗೆ ಸ್ವಲ್ಪವಾದರೂ ಅರಿವು ಇರಬೇಕು ಎಂದು ಅವರು ಕಿವಿಮಾತು ಹೇಳಿದರು.
ಪರೀಕ್ಷಾಂಗ ಕುಲಸಚಿವೆ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ. ನಂದಾಕುಮಾರಿ ಕೆ.ಪಿ., ಪ್ರಾಧ್ಯಾಪಕರಾದ ಸಂಗೀತ ಬಿ., ದಿವ್ಯ, ಡಾ. ನಾರಾಯಣ ಹೆಬ್ಬಾರ್ ಉಪಸ್ಥಿತರಿದ್ದರು.
‘ಸ್ಪಟಿಕ’ದ ಸಂಯೋಜಕಿ, ಪ್ರಾಧ್ಯಾಪಕಿ ಗಾನವಿ ಡಿ. ಸ್ವಾಗತಿಸಿ, ಅಧ್ಯಕ್ಷೆ ಜಿ.ವಿ. ಚಂದನ ವಂದಿಸಿದರು. ಮೇಘಶ್ರೀ ನಿರೂಪಿಸಿದರು. ಬಳಿಕ, ಡಾ. ವಿಜೇಶ್ ಎ.ಎಂ. ಅವರು ‘ಎಕ್ಸ್ಪ್ಲೋರಿಂಗ್ ಹೈಯರ್ ಎಜುಕೇಶನ್ ಆಂಡ್ ಜಾಬ್ ಅಪಾರ್ಚುನಿಟೀಸ್’ ಕುರಿತು ಅತಿಥಿ ಉಪನ್ಯಾಸ ನೀಡಿದರು.


