ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಹಿರಿಯ ಎನ್ನೆಸ್ಸೆಸ್ ಸ್ವಯಂಸೇವಕರಿಗೆ ಬೀಳ್ಕೊಡುಗೆ
ಉಜಿರೆ: ಇಲ್ಲಿನ ಶ್ರೀ ಧ.ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ (ಎನ್ಎಸ್ಎಸ್) ಹಿರಿಯ ಸ್ವಯಂಸೇವಕರಿಗೆ ಬೀಳ್ಕೊಡುಗೆ ಸಮಾರಂಭ ‘ಸೇವಾ ಸ್ಮೃತಿ 2023-24’ ಜು.17 ರಂದು ನಡೆಯಿತು.
ಮುಖ್ಯ ಅತಿಥಿ, ಕಾಲೇಜಿನ ನಿಕಟಪೂರ್ವ ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳಿಂದ ರಾ.ಸೇ. ಯೋಜನೆಯ ಪ್ರತಿ ಸ್ವಯಂಸೇವಕನು ಗುರುತಿಸಿಕೊಳ್ಳುತ್ತಾನೆ ಎಂದರು.
ಸಾಧನೆ ಮಾಡುವವರಿಗೆ ಇದು ಒಳ್ಳೆಯ ಕಾಲ. ಎನ್.ಎಸ್.ಎಸ್.ನಲ್ಲಿ ತೊಡಗಿಸಿಕೊಂಡಾಗ ನೀವು ಜೀವನದಲ್ಲಿ ಯಶಸ್ವಿಯಾಗುವಿರಿ. ಜವಾಬ್ದಾರಿಯುತ ನಾಗರಿಕರಾಗಿ ಬಾಳಿ ಎಂದು ಅವರು ಹಾರೈಸಿದರು.
ಯೋಜನಾಧಿಕಾರಿ ಪ್ರೊ. ದೀಪಾ ಆರ್.ಪಿ. ಮಾತನಾಡಿ, ಎನ್ನೆಸ್ಸೆಸ್ ತನಗೆ ಬೇಕಾದ ನಾಯಕನನ್ನು ತಾನೇ ನಿರ್ಮಾಣ ಮಾಡುತ್ತದೆ. ಅದರಲ್ಲಿ ಅಂತಹ ಶಕ್ತಿ ಅಡಗಿದೆ. ಸಿಹಿ ಮತ್ತು ಗಟ್ಟಿಯಾದ ಬಾಂಧವ್ಯದ ಉದಾಹರಣೆಗಳು ಎನ್ನೆಸ್ಸೆಸ್ನಲ್ಲಿ ಮಾತ್ರ ಕಾಣಸಿಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ವ್ಯಕ್ತಿತ್ವ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವಾಗುತ್ತದೆ. ವ್ಯಕ್ತಿತ್ವದ ನಿರ್ಮಾಣ ರಾಷ್ಟ್ರೀಯ ಸೇವಾ ಯೋಜನೆಯಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ‘ಸೇವಾ ಸ್ಮೃತಿ’ ನೆನಪುಗಳನ್ನು ಮೆಲುಕು ಹಾಕುವ ಕ್ಷಣ. 2023-24 ರ ಸ್ವಯಂಸೇವಕರ ಅವಧಿಯು ನಮ್ಮ ಕಾಲೇಜಿನ ಎನ್.ಎಸ್.ಎಸ್.ನ ಸುವರ್ಣ ಯುಗವಾಗಿತ್ತು. ಪ್ರತಿಯೊಬ್ಬ ಸ್ವಯಂಸೇವಕನು ತಮ್ಮ ಸಂಪೂರ್ಣ ಪರಿಶ್ರಮದಿಂದ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದರು.
ಎನ್.ಎಸ್.ಎಸ್. ಅನುಭವಗಳನ್ನು ಹಿರಿಯ ಸ್ವಯಂಸೇವಕರು ಹಂಚಿಕೊಂಡರು. ನೆನಪಿನ ಕಾಣಿಕೆ ನೀಡಲಾಯಿತು. ಸ್ವಯಂ ಸೇವಕಿ ವರ್ಷ ಕಾರ್ಯಕ್ರಮ ನಿರೂಪಿಸಿದರು.

