ಗೇರು ಕೃಷಿಯ ಬಗ್ಗೆ ಅರಿವು ಅಗತ್ಯ: ಮಮತಾ ಗಟ್ಟಿ
ಮೂಡುಬಿದಿರೆ: ಗೇರು ಕಡಿಮೆ ವೆಚ್ಚದಲ್ಲಿ ಬೆಳೆಸಬಹುದಾದ ಬೆಳೆಯಾಗಿದೆ. ಗೇರು ವಾಣಿಜ್ಯ ಬೆಳೆಯಾಗಿದ್ದರೂ ಕೃಷಿಕರು ಗೇರು ಬೆಳೆಗೆ ಪರ್ಯಾಯವಾಗಿ ರಬ್ಬರು ಬೇಸಾಯಕ್ಕೆ ಒತ್ತು ನೀಡುತ್ತಿದ್ದಾರೆ. ಪ್ರತೀ ತಾಲೂಕುಗಳಲ್ಲಿ ಕೃಷಿಕರನ್ನು ಒಗ್ಗೂಡಿಸಿ ಸರಕಾರದಿಂದ, ಗೇರು ಅಭಿವೃದ್ಧಿ ನಿಗಮದಿಂದ ಗೇರು ಕೃಷಿಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.
ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ.), ಧರ್ಮಸ್ಥಳ, ಕರ್ನಾಟಕ ಗೇರು ಉತ್ಪಾದಕರ ಸಂಘ (ರಿ.) ಮತ್ತು ಶ್ರೀ ವಿಜಯಲಕ್ಷ್ಮೀ ಪ್ರತಿಷ್ಠಾನ (ರಿ.), ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶುಕ್ರವಾರ ನಡೆದ ‘ವೃಕ್ಷ ರಕ್ಷ ವಿಶ್ವ ರಕ್ಷ’ ಅಭಿಯಾನ ಹಾಗೂ ೯ ನೇ ವರ್ಷದ ಉಚಿತ ಕಸಿ ಗೇರು ಗಿಡಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಖಿಲ ಭಾರತ ಗೇರು ಉತ್ಪಾದಕರ ಸಂಘಟನೆಯ ಅಧ್ಯಕ್ಷ ರಾಹುಲ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಪೇಜಾವರ ಮಠದ ಸಾರ್ವಜನಿಕ ಸಂಪರ್ಕ ವಿಭಾಗದ ಬಿ. ವಾಸುದೇವ ಭಟ್ ಅವರು ಗೇರು ಕೃಷಿ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಕರ್ನಾಟಕ ಗೇರು ಉತ್ಪಾದಕರ ಸಂಘದ ಅಧ್ಯಕ್ಷ ಡಿ. ಗೋಪಿನಾಥ್ ಕಾಮತ್, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ, ಪುತ್ತೂರು ನವನೀತ ನರ್ಸರಿಯ ವೇಣುಗೋಪಾಲ್ ಎಸ್.ಜೆ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಸುನಿತಾ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜ್ಯದಲ್ಲಿ ಗೇರು ಕೃಷಿಯ ಪುನಶ್ಚೇತನಕ್ಕಾಗಿ ವೈಜ್ಞಾನಿಕ ಗೇರು ಬೇಸಾಯವನ್ನು ಪರಿಚಯಿಸಿ ಕಾರ್ಯಕ್ರಮದಲ್ಲಿ ಗುಣಮಟ್ಟದ ಕಸಿ ಗೇರು ಗಿಡಗಳನ್ನು ವಿತರಣೆ ಮಾಡಲಾಯಿತು.
ಶ್ರೀ ವಿಜಯಲಕ್ಷ್ಮೀ ಪ್ರತಿಷ್ಠಾನದ ಎಸ್. ಅನಂತ ಕೃಷ್ಣರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯೋಜನೆಯ ಮೇಲ್ವಿಚಾರಕಿ ಮಮತಾ ನಿರೂಪಿಸಿದರು.