ಪುತ್ತಿಲ ವಿರುದ್ಧ ಮಾನಹಾನಿ ಸುದ್ದಿಪ್ರಕಟಿಸದಂತೆ ನ್ಯಾಯಾಲಯ ನಿರ್ಬಂಧ
ಪುತ್ತೂರು: ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಕೋರಿ ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಪುತ್ತಿಲ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪ್ರತಿಬಂಧಕಾಜ್ಞೆ ಹೊರಡಿಸಿದೆ.
ಅವರ ಮಾನಹಾನಿ ಆಗುವಂತಹ ಯಾವುದೇ ಸುದ್ದಿ ಅಥವಾ ವರದಿಗಳನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಕಟಿಸುವುದಾಗಲೀ ಅಥವಾ ಬಿತ್ತರಿಸುವುದಾಗಲೀ ಮಾಡಬಾರದು’ ಎಂದು ಬೆಂಗಳೂರಿನ ಸಿಟಿ ಮತ್ತು ಸಿವಿಲ್ ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ಆದೇಶ ಹೊರಡಿಸಿದ್ದಾರೆ.
ಅರುಣ್ ಪುತ್ತಿಲರು ಸಲ್ಲಿಸಿರುವ ಅಸಲು ದಾವೆಯ ಭಾಗವಾಗಿ ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ನಗರದ 7ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾದೀಶರು ಗುರುವಾರ ಪ್ರತಿಬಂಧಕಾಜ್ಞೆ ಹೊರಡಿಸಿದ್ದಾರೆ.
ವಿಮುಕ್ತ ಹರಿಚರಣ್ ಪ್ರಕರಣದ ಪ್ರತಿವಾದಿಯಾಗಿದ್ದಾರೆ. ಪ್ರಕರಣದ ಪ್ರತಿವಾದಿಗಳು ಮತ್ತು ಅವರಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳು ದಾವೆಯ ಮುಂದಿನ ವಿಚಾರಣೆಯವರೆಗೆ ದೂರುದಾರ ಪುತ್ತಿಲರವರ ಮಾನಹಾನಿಯುಂಟು ಮಾಡುವ ಯಾವುದೇ ಸುದ್ದಿಗಳನ್ನು ಪ್ರಸಾರ, ಪ್ರಕಟ ಮತ್ತು ಹಂಚಿಕೆ ಮಾಡಬಾರದು. ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಮತ್ತು ಸಮನ್ಸ್ ಜಾರಿಗೊಳಿಸಲು ಸೆ 24ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಪಿತೂರಿ ನಡೆಸುವ ಮೂಲಕ ಅರುಣ್ ಪುತ್ತಿಲರನ್ನು ರಾಜಕೀಯವಾಗಿ ಮುಗಿಸುವ ಸಂಚು ನಡೆಯುತ್ತಿರುವುದರ ಹಿನ್ನಲೆಯಲ್ಲಿ ಅರುಣ್ ಪುತ್ತಿಲರು ನ್ಯಾಯಾಲಯದ ಮೊರೆ ಹೋಗಿರುತ್ತಾರೆ. ನ್ಯಾಯಾಲಯವು ಯಾವುದೇ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅರುಣ್ ಪುತ್ತಿಲರ ಕುರಿತಾಗಿ ಮಾನಹಾನಿ ಹಾಗೂ ತೇಜೋವಧೆ ಮಾಡುವ ವರದಿಗಳನ್ನು ಪ್ರಕಟಿಸದಂತೆ ಪ್ರತಿಬಂಧಕಾಜ್ಞೆ ನೀಡಿರುತ್ತದೆ ಎಂದು ಅರುಣ್ ಪುತ್ತಿಲರ ಮಾಧ್ಯಮ ಪ್ರತಿನಿಧಿಯೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಧ್ಯರಾತ್ರಿ ಠಾಣೆಗೆ ಬಂದ ಮಹಿಳೆ:
ಅಡಿಯೋ ವೈರಲ್ ಗೊಂಡಿರುವ ವಿಚಾರಕ್ಕೆ ಸಂಬಂಧಿಸಿ ಜೀವಬೆದರಿಕೆ ಕರೆಗಳು ಬಂದ ಹಿನ್ನಲೆಯಲ್ಲಿ ಗುರುವಾರ ತಡರಾತ್ರಿ ನಗರಠಾಣೆಗೆ ಮಹಿಳೆಯೊಬ್ಬರು ಬಂದು ಮೌಕಿಕವಾಗಿ ದೂರು ನೀಡಿರುವುದಾಗಿ ತಿಳಿದುಬಂದಿದೆ. ಈಕೆ ಮೂಲತಾಃ ಉತ್ತರಕರ್ನಾಟಕ ಭಾಗದವರಾಗಿದ್ದು, ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕೆಲ ಸಮಯದಿಂದ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಮಹಿಳೆಯ ಮುಂಜಾನೆ ಬಂದು ಲಿಖಿತವಾಗಿ ದೂರು ನೀಡುವುದಾಗಿ ತಿಳಿಸಿದ್ದು, ಲಿಖಿತ ದೂರು ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ. ಆಕೆಯನ್ನು ಪೊಲೀಸ್ ರಕ್ಷಣೆಯಲ್ಲಿ ರಾತ್ರಿಯೇ ಅವರ ಮನೆಗೆ ಕಳುಹಿಸಿಕೊಡಲಾಗಿದೆ. ಈ ಸಂದರ್ಭದಲ್ಲಿ ರಾಜಾರಾಮ್ ಹಾಗೂ ಮತ್ತೋರ್ವ ವ್ಯಕ್ತಿಯೂ ಮಹಿಳೆಯ ಜತೆಗೆ ಠಾಣೆಗೆ ಬಂದಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.