ಸಿಎಂ ರಾಜೀನಾಮೆ ಆಗ್ರಹಿಸಿ ಬಿಜೆಪಿ ರಸ್ತೆತಡೆ
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ, ನಗರದ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ವತಿಯಿಂದ ಸೋಮವಾರ ಸಂಜೆ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆ ನಡೆಸಲಾಯಿತು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮುಖ್ಯಮಂತ್ರಿಗಳ ಜಾಗವನ್ನೇ ಅಧಿಕಾರಿ ಒತ್ತುವರಿ ಮಾಡಿರುವುದರ ಮಾಹಿತಿ ಇಲ್ಲದವರು ಮುಖ್ಯಮಂತ್ರಿಯಾಗಲು ನಾಲಾಯಕ್ಕು. 2004ರಲ್ಲಿ ಡಿಸಿಎಂ ಆಗಿದ್ದಾಗ ಅವರ ಭಾಮೈದ ಜಾಗ ಖರೀದಿಸಿದ್ದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಹಣದಲ್ಲೇ ಜಾಗವನ್ನು ಖರೀದಿಸಿರುವ ಸಂಶಯ ಇದೆ ಎಂದರು.
2013-14ರಲ್ಲಿ ಸಿಎಂ ಆಗಿದ್ದಾಗ ಬದಲಿ ಸೈಟ್ಗಳನ್ನು ಕೊಡುವುದಾಗಿ ಅಧಿಕಾರಿಗಳು ತಿಳಿಸಿದಾಗ ತಿರಸ್ಕರಿಸಿದ್ದೇನೆ ಎನ್ನುವ ಸಿಎಂ, ಜಾಗ ಒತ್ತುವರಿ ಮಾಡಿಕೊಂಡ ಅಧಿಕಾರಿಗಳ ವಿರುದ್ದ ಏಕೆ ಕ್ರಮ ಕೈಗೊಂಡಿಲ್ಲ. ಸಿಎಂ ಜಾಗವನ್ನು ಒತ್ತುವರಿ ಮಾಡಿಕೊಂಡರೆ ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮಿಸ್ಟರ್ ಕ್ಷೀನ್ ಎಂಬ ಸ್ವಯಂಘೋಷಿತ ಬಿರುದು ಘೋಷಿಸಿಕೊಂಡ ವ್ಯಕ್ತಿ. ಹಿಂದಿನ ರಾಜ್ಯಪಾಲರು ಯಡಿಯೂರಪ್ಪ ವಿರುದ್ಧ ಆದೇಶ ಹೊರಡಿಸಿದ್ದಾಗ ಸಿದ್ದರಾಮಯ್ಯನವರು ಯಡಿಯೂರಪ್ಪನವರ ರಾಜೀನಾಮೆಗೆ ಆಗ್ರಹಿಸಿದ್ದರು. ಅಲ್ಲದೆ, ನನಗೇ ಈ ಸ್ಥಿತಿ ಬಂದಿದ್ದರೆ ನೀವೆಲ್ಲಾ ಪ್ರತಿಭಟನೆ ಮಾಡುವ ಮೊದಲೇ ರಾಜೀನಾಮೆ ಕೊಡುತ್ತಿದ್ದೆ ಎಂದಿದ್ದರು. ಆದರೆ ಈಗ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
‘ನಿಮ್ಮ ಭ್ರಷ್ಟಾಚಾರವನ್ನು ಹೊರಗೆಳೆದಿರುವುದು ಬಿಜೆಪಿ ಅಲ್ಲ. ಕಾಂಗ್ರೆಸಿನವರೇ ನಿಮ್ಮ ಇನ್ನೊಂದು ಮುಖವನ್ನು ರಾಜ್ಯದ ಜನತೆಗೆ ತಿಳಿಸಿದ್ದಾರೆ. ನಿಮ್ಮ ಸುಳ್ಳಿನ ಬಟ್ಟೆ ಧರಿಸಿ ರಾಜಕಾರಣ ಮಾಡುತ್ತಿದ್ದೀರಿ, ನಿಮ್ಮ ಸುಳ್ಳಿನ ಬಟ್ಟೆಯನ್ನು ಕಳಚುತ್ತೇವೆ. ಅದರಲ್ಲಿ ರಾಜ್ಯದ ನಾಗರಿಕರು ಪಾಲ್ಗೊಳ್ಳುತ್ತಾರೆ’ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ತನ್ನನ್ನು ತಾನೇ ಹೊಗಳಿಕೊಳ್ಳುವ ಸಿದ್ದರಾಮಯ್ಯ ಹಗರಣಗಳ ಸರದಾರ. ಮುಡಾ ಹಗರಣ, ವಾಲ್ಮೀಕಿ ಹಗರಣದ ಮುಖ್ಯ ರೂವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ. ನಿವೃತ್ತಿಯ ಅಂಚಿನಲ್ಲಿರುವ ಸಿದ್ದರಾಮಯ್ಯ ಹಾಗೂ ಅವರ ನೇತೃತ್ವದ ಸರಕಾರ, ಕರ್ನಾಟಕವನ್ನು ದೋಚುವ ಕೆಲಸಕ್ಕೆ ಕೈಹಾಕಿದೆ. ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಶ್ರೀನಿಧಿ ಹೆಗ್ಡೆ, ಕಿದಿಯೂರು ಉದಯ ಕುಮಾರ್ ಶೆಟ್ಟಿ, ವೀಣಾ ಶೆಟ್ಟಿ, ರೇಶ್ಮಾ ಶೆಟ್ಟಿ, ಸಂಧ್ಯಾ ರಮೇಶ್, ಗೀತಾಂಜಲಿ ಸುವರ್ಣ, ಶ್ರೀಶ ನಾಯಕ್ ಪೆರ್ಣಂಕಿಲ ಮೊದಲಾದವರಿದ್ದರು.