ಜಿಲ್ಲೆಯಲ್ಲಿ ಕಾಲರಾ ದೃಢ: ಸಾರ್ವಜನಿಕರು ಆರೋಗ್ಯದ ಬಗ್ಗೆ ನಿಗಾ ವಹಿಸಿ: ಡಾ. ಎಚ್.ಆರ್. ತಿಮ್ಮಯ್ಯ
Saturday, September 21, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ನೆಲ್ಲಿಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಕ್ತಿಯೊಬ್ಬರಿಗೆ ಕಾಲರಾ ರೋಗ ದೃಢಪಟ್ಟಿದ್ದು, ಸದ್ಯ ಚೇತರಿಕೆ ಕಾಣುತ್ತಿದ್ದಾರೆ. ಉಳಿದಂತೆ ಜಿಲ್ಲೆಯಲ್ಲಿ ಈ ವರ್ಷ ಯಾವುದೇ ಮಂಕಿಪಾಕ್ಸ್, ನಿಫಾ ಪ್ರಕರಣಗಳು ಕಂಡುಬಂದಿಲ್ಲ. ಆದರೆ, ಸಾರ್ವಜನಿಕರು ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ವ್ಯಕ್ತಿ ಉಡುಪಿ ಜಿಲ್ಲೆಯ ಹೋಟೆಲೊಂದರಲ್ಲಿ ಆಹಾರ ತಿಂದ ವ್ಯಕ್ತಿಯಲ್ಲಿ ಕಾಲರಾ ಕಾಣಿಸಿದೆ. ಸದ್ಯ ಆತಂಕದ ಲಕ್ಷಣವಿಲ್ಲ. ನಿಗಾ ವಹಿಸುವಂತೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಕಾಲರಾ ತಡೆಯುವ ಉದ್ದೇಶಕ್ಕೆ ಹೋಟೆಲ್ ಮಾಲಕರ ಸಂಘದ ಸಭೆ ನಡೆಸಿ ಗ್ರಾಹಕರಿಗೆ ಶುದ್ಧ ಬಿಸಿ, ಆರಿಸಿದ ಕುಡಿಯುವ ನೀರು ಕೊಡುವಂತೆ ಸಹಿತ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಜಿ.ಪಂ. ಸಿಇಒ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ವಿಶೇಷ ಸಭೆ ನಡೆಸಿದ್ದು, ಎಲ್ಲಾ ಓವರ್ ಹೆಡದ ಟ್ಯಾಂಕ್ ಅನ್ನು ಮೂರು ತಿಂಗಳೊಳಿಗೊಮ್ಮೆ ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ ಎಂದರು.