ಅಪಘಾತದಲ್ಲಿ ಹೋಳಿಗೆ ವ್ಯಾಪಾರಿ ಸಾವು
ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಸಂಭವಿಸಿದ ಭೀಕರ ಅಪಘಾತ ಆಕ್ಟಿವಾ ಸವಾರ ಮೃತಪಟ್ಟ ಘಟನೆ ಪುರುಷರಕಟ್ಟೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಪುರುಷರಕಟ್ಟೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬ್ರೀಝಾ ಕಾರು ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಆಕ್ಟಿವಾಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಆಕ್ಟಿವಾ ಸವಾರ, ಹೋಳಿಗೆ ವ್ಯಾಪಾರಿಯಾಗಿದ್ದ ಬಂಟ್ವಾಳ ಪಂಜಿಕಲ್ಲು (ಪಂಜಳ) ನಿವಾಸಿ ಗಣೇಶ್ ಪ್ರಭು (53) ಮೃತಪಟ್ಟಿದ್ದಾರೆ.
ಈ ಹಿಂದೆ ಪುರುಷರಕಟ್ಟೆಯ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಗಣೇಶ್ ಪ್ರಭು ಅವರು ಬಳಿಕ ಕಾಲು ನೋವಿನ ಕಾರಣಕ್ಕಾಗಿ ಹೊಟೇಲ್ ಕೆಲಸ ಬಿಟ್ಟು ಹೋಳಿಗೆ ಲೈನ್ಸೇಲ್ ವ್ಯಾಪಾರ ಆರಂಭಿಸಿದ್ದರು. ಬಂಟ್ವಾಳದಿಂದ ಪುರುಷರಕಟ್ಟೆಗೆ ಬಂದು ಹೋಳಿಗೆ ಪಡೆದುಕೊಂಡು ಸ್ಕೂಟರ್ ನಲ್ಲಿ ಮಾರಾಟ ಮಾಡಿಕೊಂಡು ಹೋಗುತ್ತಿದ್ದರು. ಹೋಳಿಗೆ ವ್ಯಾಪಾರದಿಂದಾಗಿ ಪುತ್ತೂರು ನಗರದಾದ್ಯಂತ ಚಿರಪರಿಚಿತರಾಗಿದ್ದರು.
ಅಪಘಾತ ಸಂದರ್ಭ ಚರಂಡಿಗೆಸೆಯಲ್ಪಟ್ಟ ಗಾಯಾಳುವನ್ನು ಸ್ಥಳೀಯರಾದ ಸಲೀಂ ಮಾಯಂಗಳ, ಅನ್ಸಾರ್ ಪುರುಷರಕಟ್ಟೆ, ಪ್ರಶಾಂತ್, ಜಕ್ರಿ ಮುಕ್ವೆ ಮತ್ತಿತರರು ಚರಂಡಿಯಿಂದ ಮೇಲೆತ್ತಿ ಆಸ್ಪತ್ರೆಗೆ ಕಳುಹಿಸಿದ್ದರು. ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರು ಪತ್ನಿ ಮೀನಾಕ್ಷಿ, ಪುತ್ರ ವರುಣ್, ಪುತ್ರಿ ವಂದನಾ ಅವರನ್ನು ಅಗಲಿದ್ದಾರೆ.