ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ
Tuesday, September 24, 2024
ಉಡುಪಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಡ್ಕಲ್-ಮುದೂರು ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿ, ಈ ವರದಿ ಜಾರಿಯಾಗಬೇಕು ಎನ್ನುವವರು ಇಂಗ್ಲಿಷ್ ಮಾಧ್ಯಮ ಅಥವಾ ವಿದೇಶಿ ಕೃಪಾಪೋಷಿತ ಪರಿಸರವಾದಿಗಳಾಗಿದ್ದಾರೆ. ಅದರ ಹಿಂದೆ ಬಹುದೊಡ್ಡ ಶಕ್ತಿ ಇದೆ. ಈ ವರದಿ ಬಗ್ಗೆ ವಿರೋಧ ಹಲವು ವರ್ಷಗಳಿಂದ ಹೋರಾಟ ನಡೆದಿದ್ದರೂ ಆರನೇ ಬಾರಿ ಅಧಿಸೂಚನೆ ಹೊರಡಿಸಿರುವುದನ್ನು ಗಮನಿಸಿದರೆ, ಈ ವರದಿ ಜಾರಿಯಾಗಬಹುದೆಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.
ಹಿಂದೆ ಮಾಧವ ಗಾಡ್ಗೀಳ್ ವರದಿ ಜಾರಿಗೆ ಹೊರಟಾಗ ಕೇರಳದಲ್ಲಿ ವ್ಯಾಪಕ ಹೋರಾಟ ನಡೆದಿತ್ತು. ಆ ಕಾರಣಕ್ಕೆ ಅದರ ಬದಲಾಗಿ ಕಸ್ತೂರಿ ರಂಗನ್ ವರದಿ ಸಿದ್ಧಪಡಿಸಲಾಗಿದೆ. ಅದರಲ್ಲಿರುವ ಅಂಶಗಳನ್ನೇ ಸ್ವಲ್ಪ ಬದಲಿಸಿ ಇದರಲ್ಲೂ ಬಳಸಲಾಗಿದೆ. ನಾವು ಎಚ್ಚೆತ್ತು ಸಂಘಟಿತ ಹೋರಾಟ ಮಾಡದಿದ್ದರೆ ಈ ವರದಿ ಜಾರಿ ಮಾಡಿಯೇ ಮಾಡುತ್ತಾರೆ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಡಾ ಮಂಜುನಾಥ ಭಂಡಾರಿ, ಮಾಜಿ ಶಾಸಕ ಗೋಪಾಲ ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ, ವಾಸುದೇವ ಮುದೂರು ಮತ್ತಿತರರು ಭಾಗವಹಿಸಿದ್ದರು.