ಪೋಕ್ಸೊ: ಮರು ಪ್ರಕರಣ ದಾಖಲಿಸಲು ಸೂಚನೆ
ಉಡುಪಿ: ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ ‘ಬಿ’ ವರದಿಯನ್ನು ತಿರಸ್ಕರಿಸಿದ ಜಿಲ್ಲಾ ಪೋಕ್ಸೊ ನ್ಯಾಯಾಲಯ, ಮರು ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.
ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನೊಂದ ಬಾಲಕನೊಬ್ಬ ಸ್ಥಳೀಯ ಮಸೀದಿಗೆ ನಮಾಜ್ಗೆ ತೆರಳಿದ ಸಂದರ್ಭ ಆತನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆರೋಪಿ ಫೈಜಲ್ ಬ್ಯಾರಿ ಮತ್ತು ಆ ಬಗ್ಗೆ ಬೇರೆಯವರಿಗೆ ವಿಷಯ ತಿಳಿಸದಂತೆ ಕೊಲೆ ಬೆದರಿಕೆ ಹಾಕಿರುವ ಆರೋಪಿಗಳಾದ ಆಖಿಲಾ ಮತ್ತು ಮೊಹಾಜಮ್ ವಿರುದ್ಧ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ ತರುವಾಯ ಸುಳ್ಳು ಪ್ರಕರಣ ಎಂದು ಉಡುಪಿಯ ಜಿಲ್ಲಾ ಪೋಕ್ಸೊ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದರು. ಆ ವರದಿಯ ಆಧಾರದ ಮೇಲೆ ಪೊಲೀಸರ ‘ಬಿ’ ವರದಿಯನ್ನು ಪ್ರಶ್ನಿಸಿ ನೊಂದ ಬಾಲಕ ನ್ಯಾಯಾಲಯಕ್ಕೆ ಹಾಜರಾಗಿ ವೈದ್ಯರು, ಇತರ ಸಾಕ್ಷಿಗಳನ್ನು ತನ್ನ ಪರವಾಗಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಿದ್ದ.
ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಮೇಲ್ನೋಟಕ್ಕೆ ಪ್ರಕರಣ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸರ ‘ಬಿ’ ವರದಿಯನ್ನು ತಿರಸ್ಕರಿಸಿ, ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರುವಾಗುವಂತೆ ಸಮನ್ಸ್ ನೀಡಿ ಆರೋಪಿಗಳ ವಿರುದ್ಧ ಮರು ಪ್ರಕರಣ ದಾಖಲಿಸುವಂತೆ ಉಡುಪಿ ಜಿಲ್ಲಾ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ನೊಂದ ಬಾಲಕನ ಪರವಾಗಿ ಉಡುಪಿ ವಕೀಲ ಚೇರ್ಕಾಡಿ ಅಖಿಲ್ ಬಿ. ಹೆಗ್ಡೆ ವಾದ ಮಂಡಿಸಿದ್ದರು.