ಉಳ್ಳಾಲದಲ್ಲಿ 77ನೇ ವರ್ಷದ ಶಾರದೋತ್ಸವ
ಉಳ್ಳಾಲ: ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಅ.8 ರಿಂದ ಅ.13 ರವರೆಗೆ 77ನೇ ವರ್ಷದ ಶಾರದಾ ಉತ್ಸವ ಜರಗಲಿದೆ.
ಅ.8 ರಂದು ಸಂಜೆ ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನೆ ಬಳಿಕ ಶಾರದಾ ಮಾತೆಯ ಪಟ್ಟಬಂಧೋತ್ಸವ ಮೆರವಣಿಗೆ ಹೊರಡುವುದು, ಅ.9 ರಂದು ಬೆಳಿಗ್ಗೆ ಇಲ್ಲಿನ ಶ್ರೀ ಶಾರದಾ ನಿಕೇತನದಲ್ಲಿ ಶಾರದೆಯ ಪ್ರತಿಷ್ಠೆ ನೆರವೇರಲಿದೆ.
ಅ.10 ರಂದು ಬೆಳಿಗ್ಗೆ ಪೈಲ್ವಾನ್ ಮೋತಿ ಪುತ್ರನ್ ಸ್ಮರಣಾರ್ಥ ದ.ಕ. ಜಿಲ್ಲಾ ಮಟ್ಟದ ಬೆಳ್ಳಿ ಗದೆಯ ಕುಸ್ತಿ ಪಂದ್ಯಾಟವು ವೀರ ಮಾರುತಿ ವ್ಯಾಯಾಮ ಶಾಲೆ, ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಬ್ರದರ್ಸ್ ಯುವಕ ಮಂಡಲದ ಸಂಯೋಜನೆಯೊಂದಿಗೆ ಜರಗಲಿದೆ. ಅ.11 ರಂದು ಸಂಜೆ ದಿ. ಯು. ದಯಾನಂದ ನಾಯಕ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ ಮೊಗವೀರಪಟ್ಣ ಸಂಸ್ಥೆಗೆ ಪ್ರಶಸ್ತಿ ನೀಡಲಾಗುವುದು.
ಅ.12 ರಂದು ಬೆಳಿಗ್ಗೆ ‘ಚಂಡಿಕಾ ಯಾಗ’, ಮಧ್ಯಾಹ್ನ ಸಾರ್ವಜನಿಕ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಅ.13 ರಂದು ಸಂಜೆ ಶಾರದಾ ವಿಸರ್ಜನಾ ಮೆರವಣಿಗೆ ಹೊರಡುವುದು, ಸಮುದ್ರ ಕಿನಾರೆಯಲ್ಲಿ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಸಾಮರಸ್ಯ ವೇದಿಕೆ, ಮಂಗಳೂರು ವಿಭಾಗದ ಸಂಯೋಜಕ ರವೀಂದ್ರ ಪುತ್ತೂರು ಸಮಾರೋಪ ಭಾಷಣ ಮಾಡಲಿದ್ದು, ಬಳಿಕ ಶಾರದಾ ವಿಗ್ರಹವನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುವುದು.
ಪ್ರತಿ ದಿನ ದುರ್ಗಾ ಅಷ್ಟೋತ್ತರ ನಮಸ್ಕಾರ, ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ,ಸಂಗೀತ, ಆಟೋಟ, ಕಬಡ್ಡಿ ಸ್ಪರ್ಧೆಗಳಲ್ಲದೆ ಭಜನೆ, ಅನ್ನ ಸಂತರ್ಪಣೆ, ವಿದ್ಯಾರಂಭ ಇತ್ಯಾದಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿರುವುದೆಂದು ಉತ್ಸವ ಸಮಿತಿಯ ಅಧ್ಯಕ್ಷ ಭರತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.