ರೈಲು ಢಿಕ್ಕಿ ಶಂಕೆ: ಯುವಕನ ಮೃತ್ಯು
Monday, October 14, 2024
ಬಂಟ್ವಾಳ: ರೈಲು ಢಿಕ್ಕಿಯಾಗಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಬಿ.ಸಿ. ರೋಡಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಬಿ.ಸಿ. ರೋಡಿಗೆ ಸಮೀಪದ ಕಾಮಾಜೆ ನಿವಾಸಿ ಕರುಣಾಕರ (35) ಎಂದು ಗುರುತಿಸಲಾಗಿದೆ.
ಮರದ ಕೆಲಸ ಮಾಡುತ್ತಿದ್ದ ಅವರು ಮನೆಗೆ ಆಧಾರಸ್ತಂಭವಾಗಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಮೃತರಿಗೆ, ಒಂದು ವರ್ಷದ ಹೆಣ್ಣುಮಗುವಿದೆ.
ಸುಮಾರು 11 ಗಂಟೆಯ ವೇಳೆ ಸಂಚರಿಸುತ್ತಿದ್ದ ರೈಲು ಢಿಕ್ಕಿಯಾಗಿರಬೇಕೆಂದು ಶಂಕಿಸಲಾಗಿದೆ. ಬಿ.ಸಿ. ರೋಡಿನ ರೈಲು ಸ್ಟೇಷನ್ನ ಸಮೀಪದಲ್ಲಿ ಕುತ್ತಿಗೆ ಹಾಗೂ ದೇಹ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಕೆಲಸಕ್ಕೆ ಹೋಗುವ ವೇಳೆ ಇದೇ ರೈಲು ಹಳಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆಂಬ ವಿಚಾರವನ್ನು ಇವರ ಕುಟುಂಬಿಕರು ತಿಳಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಹಾಗೂ ರೈಲ್ವೆ ಇಲಾಖೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.