ವಾಮದಪದವು: ಸ್ವಚ್ಛಥಾನ್ ಆಂದೋಲನ
Wednesday, October 9, 2024
ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಇರ್ವತ್ತೂರು ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ‘ಸ್ವಚ್ಛತಾ ಹೀ ಸೇವಾ’ ಇದರ ಅಂಗವಾಗಿ ‘ಸ್ವಚ್ಛಥಾನ್ ಆಂದೋಲನ’ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್ ಬಿ.ಆರ್. ಅವರು ಚಾಲನೆ ನೀಡಿದರು.
ಗ್ರಾಮೀಣ ಜನರಲ್ಲಿ ಸ್ಚಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇರ್ವತ್ತೂರು ಗ್ರಾಮದ ಬಿ.ಎಸ್. ನಗರದ ಐವತ್ತು ಮನೆಗಳಿಗೆ, ತೃತೀಯ ಸಮಾಜ ಕಾರ್ಯ ವಿಭಾಗದ ಮೂವತ್ತು ವಿದ್ಯಾರ್ಥಿಗಳು ಪ್ರತಿ ಮನೆ, ಮನೆಗಳಿಗೆ ತೆರಳಿ ಘನತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿಗಳನ್ನು ನೀಡಿ ಜಾಗೃತಿ ಮೂಡಿಸಿದರು.
ಕಾರ್ಯದರ್ಶಿ ನಾರಾಯಣ ನಾಯ್ಕ್, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಮೇರಿ ಎಂ.ಜೆ., ಉಪನ್ಯಾಸಕರಾದ ಉದಯ್ ಕುಮಾರ್ ಸಿ.ಆರ್ ಹಾಗೂ ಚಂದ್ರ ಎಸ್., ಸ್ಥಳೀಯ ಪ್ರಕೃತಿ ಸಂಜೀವಿನಿ ಒಕ್ಕೂಟದ ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಸ್ಥಳೀಯರು ಪಂಚಾಯತ್ನ ಸಿಬ್ಬಂದಿ ವರ್ಗ, ತೃತೀಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.