
ಸಾರ್ವಜನಿಕ ರಂಗದ ಉದ್ದಿಮೆಗಳಿಂದ ಶೇ.4 ಖರೀದಿ ಮೀಸಲು: ಕೋಕಿಲ ಎ.
ಮಂಗಳೂರು: ಸಾರ್ವಜನಿಕ ರಂಗದ ಉದ್ದಿಮೆಗಳು ಶೇಕಡ 4ರಷ್ಟು ಖರೀದಿಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಉದ್ಯಮಿಗಳಿಂದ ಮಾಡಬೇಕು ಎಂಬ ನಿಯಮವಿದ್ದು, ಗುರಿ ಸಾಧಿಸಲು ಎಸ್.ಸಿ.-ಎಸ್.ಟಿ ಉದ್ಯಮಿಗಳು ಸಹಕರಿಸಬೇಕು ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಎಸ್.ಸಿ.ಎಸ್.ಟಿ. ಹಬ್ ಬೆಂಗಳೂರು ಕೇಂದ್ರದ ಮುಖ್ಯಸ್ಥೆ ಕೋಕಿಲ ಎ. ಅವರು ಹೇಳಿದರು.
ಅವರು ನಗರದ ಉರ್ವ ಗಾಂಧಿನಗರದ ಸೇವಾಕೇಂದ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಎಸ್.ಸಿ.ಎಸ್.ಟಿ. ಹಬ್ ಮತ್ತು ಎಂ. ಆರ್ಪಿಎಲ್ ಸಹಯೋಗದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಒಂದು ತಿಂಗಳ ಉಚಿತ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಂಆರ್ಪಿಎಲ್ನಂತಹ ಬೃಹತ್ ಉದ್ದಿಮೆಗಳು ವಾರ್ಷಿಕ ಕೋಟ್ಯಾಂತರ ರೂಪಾಯಿ ಖರೀದಿ ನಡೆಸುತ್ತವೆ. ಇಂತಹ ಉದ್ಯಮಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಎಸ್.ಸಿ.-ಎಸ್.ಟಿ ಉದ್ಯಮಿಗಳು ಮುಂದಾಗಬೇಕು. ಹಲವು ಸಾರ್ವಜನಿಕ ರಂಗದ ಉದ್ದಿಮೆಗಳಿಗೆ ಸರಕಾರ ನಿಗದಿ ಪಡಿಸಿದ ಗುರಿ ಸಾಧಿಸಲು ಸಾಧ್ಯ ಆಗುತ್ತಿಲ್ಲ. ಆದುದರಿಂದ ಇತ್ತ ಗಮನ ಹರಿಸಬೇಕು. ಮಹಿಳೆಯಲ್ಲಿ 4ನೇ 3 ರಷ್ಟು ಮೀಸಲಾತಿ ಕೂಡ ಇದೆ ಎಂದು ಕೋಕಿಲ ಅವರು ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸ್ವ-ಉದ್ಯೋಗ ಮತ್ತು ಉದ್ದಿಮೆಗಳ ಸ್ಥಾಪಿಸಲು ಸರಕಾರದಿಂದ ದೊರೆಯುವ ಸಾಲ ಸಹಾಯಧನಗಳ ಮಾಹಿತಿ ನೀಡಿದ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ಅಧಿಕಾರಿಗಳಾದ ಸುಜಾತ ಮತ್ತು ಗೀತಾ ಅವರು ಬ್ಯಾಂಕ್ ಸಾಲ ಪಡೆಯಲು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಹಾಯ ಮಾಡುವುದಾಗಿ ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ (ನೋಂ.) ಮಂಗಳೂರು ರಿಫೈನರಿ ಯಾಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್. ನೇಶನಲ್ ಎಸ್.ಸಿ., ಎಸ್.ಟಿ. ಹಬ್, ಬೆಂಗಳೂರು, ಎಂ.ಆರ್.ಪಿ.ಎಲ್. ಅಧಿಕಾರಿ ಡಾ. ರುಡಾಲ್ಪ್ ನೋರೋಹ್ನ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಕಾರ್ಯಕ್ರಮ ಸಂಘಟಕಿ ವಸಂತಿ, ತರಬೇತಿ ಸಂಯೋಜಕಿ ಸೌಮ್ಯಶ್ರೀ ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ 600ಕ್ಕೂ ಹೆಚ್ಚು ಸ್ವ-ಉದ್ಯೋಗ ತರಬೇತಿ ಮತ್ತು ವೃತ್ತಿ ಕೌಶಲ್ಯ ಕಾರ್ಯಕ್ರಮಗಳನ್ನು ನಡೆಸಿದ್ದು, ಒಂದು ಸಾವಿರಕ್ಕು ಹೆಚ್ಚು ಮಂದಿಗೆ ಸ್ವ-ಉದ್ಯೋಗ, ಉದ್ಯಮ ಸ್ಥಾಪಿಸಲು ಸಹಕಾರ ನೀಡಿದೆ ಎಂದು ಪ್ರಸ್ತಾವಿಕವಾಗಿ ಮಾತನಾಡಿದ ಮೋಹನಾಂಗಯ್ಯ ಸ್ವಾಮಿ ಹೇಳಿದರು.