ಮೈಸೂರು ದಸರಾದ ವಿಜೃಂಭಣೆಯನ್ನೇ ಹೋಲುವ ನಮ್ಮ ಕುಡ್ಲದ ದಸರಾ...
ದಸರಾ ಎಂದರೆ ಪ್ರತಿಯೊಬ್ಬರಿಗೂ ನೆನಪಾಗುವುದು ನಮ್ಮ ರಾಜ್ಯದ ಮೈಸೂರು. ದೇಶ ವಿದೇಶದ ಮೂಲೆ ಮೂಲೆಗಳಿಂದ ಜನಗಳು ಬಂದು ಸೇರುವುದುಂಟು. ಮೈಸೂರು ರಾಜರಿಂದ ಪ್ರಾರಂಭವಾದ ಈ ಸಂಸ್ಕೃತಿಯನ್ನು ಇಂದಿಗೂ ಅಷ್ಟೇ ಅಚ್ಚುಕಟ್ಟಾಗಿ ನಮ್ಮ ಮೈಸೂರು ರಾಜ ಮನೆತನ ಹಾಗೂ ರಾಜ್ಯ ಸರ್ಕಾರ ನಡೆಸುತ್ತಿರುವುದು ಕರ್ನಾಟಕದವರಾದ ನಮ್ಮೆಲ್ಲರ ಹೆಮ್ಮೆ.
ಅದೇ ರೀತಿ ನಮ್ಮ ಕುಡ್ಲ(ಮಂಗಳೂರು)ದ ದಸರವು ಕೂಡ ಮೈಸೂರು ದಸರಾವನ್ನು ಹೋಲುವ ಒಂದು ಉತ್ಸವ. ಒಂಬತ್ತು ದಿನಗಳು ಅತ್ಯಂತ ವಿಜೃಂಭಣೆಯಿಂದ ನಡೆಯುವ ಈ ದಸರಾವು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಜರುಗುವುದು ಅತ್ಯಂತ ಮೋಹಕ. ದಸರಾ ಪ್ರತಿಯೊಂದು ದಿನಗಳಲ್ಲಿ ದೇವಸ್ಥಾನದ ಪ್ರತಿಯೊಂದು ಗೋಡೆಯು ವಿದ್ಯುತ್ ದೀಪಗಳೊಂದಿಗೆ ಅಲಂಕಾರಗೊಂಡಿದ್ದು, ವಿವಿಧ ರೀತಿಯ ಸಾಧನಗಳಿಂದ ಆವೃತವಾಗಿರುತ್ತವೆ. ದೇವಸ್ಥಾನದ ಅವರಣವಂತು ವಜ್ರದ ಮೆರುಗನ್ನು ಪಡೆದಿದ್ದು, ದೇವಸ್ಥಾನದ ಕಂಬಗಳು ನೋಡುಗರನ್ನ ಕೈಬಿಸಿ ತನ್ನತ್ತ ಸೆಳೆಯುತ್ತಿವೆ. ಒಟ್ಟಾರೆಯಾಗಿ ದೇವಸ್ಥಾನವು ದಸರಾ ಹಬ್ಬದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊರಸೂಸುತ್ತಿದೆ.
ಮೈಸೂರು ದಸರಾದ ವಿಜೃಂಭಣೆಗೆ ಹೋಲಿಸಿದರೆ, ದಸರಾದ ವಿಶೇಷತೆ ಎಂದರೆ 9 ದಿನಗಳ ಕಾಲ ಸತತವಾಗಿ 9 ದೇವತೆಯರನ್ನು ಪೂಜಿಸುವುದು. ದಿನದಿಂದ ದಿನಕ್ಕೆ ಪೂಜೆಯ ವಿಶೇಷ ಹೆಚ್ಚಾಗುತ್ತ ಹೋಗುತ್ತದೆ. ಕೊನೆಯ ದಿನವಂತು ಅಂಬಾರಿ ಮತ್ತು ಅಂಬಾರಿಯನ್ನು ಹೊರುವ ಆನೆಯನ್ನು ಬಿಟ್ಟರೆ ಮಿಕ್ಕಿದ್ದೆಲ್ಲವೂ ಇಲ್ಲಿ ನೋಡುಗರಿಗೆ ಅಲಭ್ಯ. ಮೈ ಮರೆತು ಆ ಅವಿಸ್ಮರಣೀಯ ಕ್ಷಣವನ್ನು ಕಣ್ತುಂಬಿಕೊಳ್ಳುವುದೇ ರೋಮಾಂಚನ. ಅದೇ ರೀತಿಯಲ್ಲಿ ಮಂಗಳೂರಿನ ದಸರಾದಲ್ಲಿ ಸಾಗುವ ಮೆರವಣಿಗೆ ರೋಮಾಂಚಕ.
ದಸರಾದ ಮೇರುಗಿನೊಂದಿಗೆ ದಸರಾದ ವಿಜೃಂಭಣೆ ನೋಡಿ ಖುಷಿಯನ್ನು ಅನುಭವಿಸಲು ಜನ ಧಾವಿಸಿದರೆ, ಇನ್ನೊಂದೆಡೆ ತಮ್ಮ ಹೊಟ್ಟೆಪಾಡನ್ನು ಸಾಗಿಸಲು ನೆರವಾಗುವ ಈ ದಸರಾವನ್ನು ಅನುಭವಿಸಲು ಹಲವಾರು ಮಂದಿ ಧಾವಿಸುತ್ತಾರೆ. ಒಟ್ಟಾರೆಯಾಗಿ ನೋಡುಗರಿಗೂ ಮತ್ತೆ ಬದುಕ ಸಾಗಿಸುವವರಿಗೂ ನೆರವಾಗುತ್ತದೆ ನಮ್ಮಿ ಕುಡ್ಲದ ದಸರಾ.
-ದೀಪಾ
ಪತ್ರಿಕೋದ್ಯಮ ವಿದ್ಯಾರ್ಥಿನಿ,
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.
