ಅರುಣ್ ಉಳ್ಳಾಲ್ ಎಂಬವರಿಗೆ ತುಳು ಅಕಾಡೆಮಿ ನೀಡಿರುವ ಪ್ರಶಸ್ತಿಯ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಸಮುದಾಯ ಮಂಗಳೂರು ಒತ್ತಾಯ
ಮಂಗಳೂರು: ಅರುಣ್ ಉಳ್ಳಾಲ್ ಎಂಬವರು ಇತ್ತೀಚೆಗೆ ಕೋಮು ದ್ವೇಷದ ಭಾಷಣ ಮಾಡಿರುವ ಬಗ್ಗೆ ಅವರ ಮೇಲೆ ಪ್ರಕರಣ ದಾಖಲಾಗಿದೆ. ಸದ್ರಿ ವ್ಯಕ್ತಿಯು ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿಜೇತ ಎಂಬುದಾಗಿ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟವಾಗಿರುತ್ತದೆ. ಹಾಗೂ ಇವರಿಗೆ ಅಕಾಡೆಮಿ ನೀಡಿರುವ ಪ್ರಶಸ್ತಿಯನ್ನು ವಾಪಾಸು ಪಡೆಯುವಂತೆ ಸಾರ್ವಜನಿಕರ ಹಾಗೂ ಹಿರಿಯ ಲೇಖಕರು, ಶಿಕ್ಷಕರು, ಚಿಂತಕರು ಆಗ್ರಹ ಮಾಡಿರುವ ವಿಚಾರ ಕೂಡ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುತ್ತದೆ.
ಈ ಹಿನ್ನೆಲೆಯಲ್ಲಿ ಅಕಾಡೆಮಿಯ ಅಧಿಕೃತ ಪತ್ರಿಕೆ ‘ಮದಿಪು’ ಪತ್ರಿಕೆಯನ್ನು ಪರಿಶೀಲನೆ ಮಾಡಿದಾಗ ಇದರಲ್ಲಿ ಎಲ್ಲಿಯೂ ಅರುಣ್ ಉಳ್ಳಾಲ್ ಎಂಬರಿಗೆ ತುಳು ಅಕಾಡೆಮಿ ಪ್ರಶಸ್ತಿ ನೀಡಿರುವ ಬಗ್ಗೆ ಉಲ್ಲೇಖ ಇರುವುದಿಲ್ಲ. ಆರಂಭ ಕಾಲದಿಂದಲೂ ಇತ್ತೀಚಿನ ತನಕ ಅಕಾಡೆಮಿಯು ನೀಡಿದ ಪ್ರಶಸ್ತಿಗಳ ವಿವರ ಅಕಾಡೆಮಿಯ ‘ಮದಿಪು’ ಪತ್ರಿಕೆಯಲ್ಲಿದೆ.
ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕರ ಗೊಂದಲ ನಿವಾರಿಸುವ ಸಲುವಾಗಿ ತುಳು ಅಕಾಡೆಮಿಯು ಅರುಣ್ ಉಳ್ಳಾಲ್ ಎಂಬವರಿಗೆ ಅಕಾಡೆಮಿಯ ಪ್ರಶಸ್ತಿಯನ್ನು ನೀಡಿದೆಯಾಗಿದ್ದರೆ, ಯಾವ ಕ್ಷೇತ್ರದ ಸಾಧನೆಗಾಗಿ, ಯಾವ ವರ್ಷದಲ್ಲಿ ಎಂಬ ವಿಷಯವನ್ನು ತಕ್ಷಣ ಪ್ರಕಟಣೆಯ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕು.
ತುಳುವರ ಘನತೆ, ಸಾಮರಸ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಅಕಾಡೆಮಿಯು ಈ ಬಗ್ಗೆ ತಕ್ಷಣವೇ ಸ್ಪಂದಿಸಬೇಕು. ಎಂದು ಈಗಾಗಲೇ ಆಕಾಡೆಮಿ ಅಧ್ಯಕ್ಷರಿಗೆ ಮನವಿಯನ್ನು ಸಲಿಸಿದ್ದು, ಈ ಕುರಿತು ತಕ್ಷಣವೇ ಸ್ಪಂದಿಸಬೇಕೆಂದು ಸಮುದಾಯ ಮಂಗಳೂರು ಒತ್ತಾಯಿಸುತ್ತದೆ ಎಂದು ಸಮುದಾಯ ಮಂಗಳೂರು ಇದರ ಅಧ್ಯಕ್ಷ ದಯಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.