ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸಿ: ಹಿಂದೂ ಜನಜಾಗೃತಿ ಸಮಿತಿ
Tuesday, October 1, 2024
ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸಚಿವರಿಗೆ ಮನವಿ ಸಲ್ಲಿಕೆ
ಮಂಗಳೂರು: ಕರ್ನಾಟಕ ರಾಜ್ಯದ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಉರ್ದು ಭಾಷೆಯನ್ನು ಆಯ್ಕೆ ಮಾಡದಿದ್ದರೆ ಅರ್ಜಿಯ ಮುಂದಿನ ಪ್ರಕ್ರಿಯೆ ಮಾಡಲು ಸಾಧ್ಯವಿಲ್ಲ. ಈ ಮೂಲಕ ಕರ್ನಾಟಕ ಸರ್ಕಾರ ಕ್ರೈಸ್ತರಿಗೆ ಹಿಂದುಗಳಿಗೆ ಒಂದು ರೀತಿಯಲ್ಲಿ ಅನ್ಯಾಯ ಮಾಡುತ್ತಿರುವುದು ಸ್ಪಷ್ಟ ಗಮನಕ್ಕೆ ಬರುತ್ತದೆ. ಕರ್ನಾಟಕದಲ್ಲಿ ಕನ್ನಡವೇ ರಾಜ್ಯಭಾಷೆ. ಈ ರೀತಿ ಉರ್ದು ಭಾಷೆಗೆ ಕಡ್ಡಾಯ ಮಾಡಿ ಕನ್ನಡಿಗರನ್ನು ಸಹ ಅವಮಾನ ಮಾಡಿರುವುದು ಕಂಡುಬರುತ್ತದೆ. ಎಂದು ಹಿಂದೂ ಜನಜಾಗೃತಿ ಸಮಿತಿಯ ಪವಿತ್ರಾ ಕುಡ್ವ ಇವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಮಂಗಳೂರಿನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ಇವರಿಗೆ ಇಂದು ಮನವಿಯನ್ನು ನೀಡಲಾಯಿತು.
ಕಾಂಗ್ರೆಸ್ ಶಾಸನವಿರುವ ಕರ್ನಾಟಕದಲ್ಲಿ ಪದೇ ಪದೇ ಹಿಂದೂಗಳ ಬಗ್ಗೆ ತುಷ್ಟೀಕರಣ ನೀತಿ ಅನುಸರಿಸುವುದು ಗಮನಕ್ಕೆ ಬರುತ್ತಿದೆ. ಕೇವಲ ಇದೊಂದೇ ಘಟನೆ ಅಲ್ಲದೆ ಇತ್ತೀಚಿಗೆ ರಾಜ್ಯದಲ್ಲಿ ನಡೆದ ಅನೇಕ ಘಟನೆಗಳೂ ಕಾಂಗ್ರೆಸ್ನ ಓಲೈಕೆ ರಾಜಕಾರಣದ ಷಡ್ಯಂತ್ರವನ್ನು ಎತ್ತಿ ತೋರಿಸುತ್ತದೆ. ಈ ಬಾರಿ ಶಿಕ್ಷಕ ದಿನಾಚರಣೆ ವೇಳೆ, ಉಡುಪಿಯ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಇವರು ಹಿಜಾಬ್ ಘಟನೆ ವೇಳೆ ಹಿಜಾಬ್ ಧರಿಸಿ ಬರಲು ವಿರೋಧಿಸಿದ್ದರೆಂದು ಅವರಿಗೆ ಸಲ್ಲಬೇಕಿದ್ದ `ಉತ್ತಮ ಶಿಕ್ಷಕ' ಪ್ರಶಸ್ತಿ ರದ್ದುಗೊಳಿಸಲಾಯಿತು. ನಾಗಮಂಗಲದಲ್ಲಿ ನಡೆಯುತ್ತಿದ್ದ ಶಾಂತಿಯುತ ಗಣೇಶೋತ್ಸವದ ಮೇಲೆ ಮತಾಂಧರು ಕಲ್ಲು ತೂರಾಟ ಮಾಡಿದ್ದರೂ, ಈ ಪ್ರಕರಣದಲ್ಲಿ ಆರೋಪಿ ನ.1 ರಿಂದ 23 ವರೆಗೆ ಹಿಂದೂ ಕಾರ್ಯಕರ್ತರ ಹೆಸರುಗಳನ್ನು ಸೇರಿಸಲಾಗಿತ್ತು. ಅಷ್ಟೇ ಅಲ್ಲದೆ ಈ ಬಾರಿಯ ಗಣೇಶೋತ್ಸವ ಆಚರಣೆ ಸಮಯದಲ್ಲಿ ಸಹ ಪ್ರಸಾದಕ್ಕೆ ಬಿಬಿಎಂಪಿ ಎಫ್ಎಸ್ಎಸ್ಎಐ ಕಡ್ಡಾಯಗೊಳಿಸಿತ್ತು.
ಈ ಎಲ್ಲ ಘಟನೆಗಳನ್ನು ನೋಡುವಾಗ ಕಾಂಗ್ರೆಸ್ ಹಿಂದೂಗಳ ಮೇಲೆ ನಡೆಸುತ್ತಿರುವ ಅನ್ಯಾಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಈಗ ಅಂಗನವಾಡಿ ಹುದ್ದೆಗಳ ಬಗ್ಗೆಯೂ ಸರಕಾರದ ಈ ನಿಲುವಿನಿಂದ ಜನತೆಯಲ್ಲಿ ಅತ್ಯಂತ ಭಯದ ವಾತಾವರಣ ನಿರ್ಮಾಣವಾಗಿದ್ದು ಸಮಸ್ತ ಹಿಂದೂಗಳು ಇದರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಹಾಗಾಗಿ ಇಲಾಖೆಯ ಈ ಆದೇಶವನ್ನು ಕೂಡಲೇ ಹಿಂಪಡೆದು ಜಾಲತಾಣದಲ್ಲಿ ಅವಶ್ಯಕ ಬದಲಾವಣೆ ಮಾಡಬೇಕೆಂದು ಮನವಿ ಮೂಲಕ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಶೇಖರ್ ಕೋಟಿಯಾನ್, ಕೃಷ್ಣ ಮಂದಿರ, ಅಮ್ಟೂರು, ನಾರಾಯಣ ಗುರು ಸೇವಾ ಸಮಿತಿಯ ದಿನಕರ ಪೂಜಾರಿ, ಬಜಾಲ್, ಉದ್ಯಮಿ ಭಾಸ್ಕರ್ ಸುವರ್ಣ, ದಕ್ಷಿಣ ಕನ್ನಡ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿ ಸೇವಕರು ಪವಿತ್ರ ಕುಡ್ವ, ಸುಧಾಕರ, ರಾಜೇಶ್ ಆಚಾರ್ಯ, ಬಾಲಗಂಗಾಧರ ಉಪಸ್ಥಿತರಿದ್ದರು.