ಕ್ರೀಡಾ ಪ್ರತಿಭೆಗಳು ಬೆಳೆಯಲು ಕ್ರೀಡಾಕೂಟ ಪೂರಕ: ಪೂಜಾರಿ
ಮಂಗಳೂರು: ದೈಹಿಕ ಆರೋಗ್ಯವನ್ನು ಕಾಪಾಡುವ ಜತೆಯಲ್ಲಿ ಕ್ರೀಡಾ ಪ್ರತಿಭೆಗಳು ಬೆಳೆಸಲು ಕ್ರೀಡಾಕೂಟಗಳು ಬಹಳ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.
ಅವರು ಭಾನುವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳೂರು ತಾಲೂಕು ಬಿಲ್ಲವ ಸಂಘದ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಅಗತ್ಯ ಈ ನಿಟ್ಟಿನಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅವರು ಬಹಳಷ್ಟು ಆರೋಗ್ಯವಂತರಾಗಿ ಇರುತ್ತಾರೆ. ದಸರಾ ಕ್ರೀಡಾಕೂಟದ ಮೂಲಕ ಸಾಕಷ್ಟು ಹೊಸ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ ಮಾತನಾಡಿ, ಕ್ರೀಡಾಕೂಟಗಳು ಹೆಚ್ಚಾಗಿ ನಡೆದರೆ ಕ್ರೀಡಾಪಟುಗಳು ಕೂಡ ಹೆಚ್ಚಾಗಿ ಹೊರಬರುತ್ತಾರೆ. ದಸರಾ ಕ್ರೀಡಾಕೂಟದ ಮೂಲಕ ಮತ್ತಷ್ಟು ಕ್ರೀಡಾ ಪ್ರತಿಭೆಗಳು ಬೆಳಗಲಿ ಎಂದರು.
ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ, ಸರಕಾರ ಮಟ್ಟದಲ್ಲಿ ದಸರಾ ಕ್ರೀಡಾಕೂಟಗಳು ನಡೆಯುತ್ತಿದೆ. ಆದರೆ ಬಿಲ್ಲವ ಸಂಘಟನೆ ಕ್ರೀಡಾಪಟುಗಳನ್ನು ಬೆಳೆಸಲು ದಸರಾ ಕ್ರೀಡಾಕೂಟವನ್ನು ಜಿಲ್ಲಾ ಮಟ್ಟದಲ್ಲಿ ಮಾಡುವ ಜತೆಗೆ ಮುಕ್ತ ಅವಕಾಶವನ್ನು ನೀಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಚೀಪ್ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್, ಎಂಎಲ್ಸಿ ಐವನ್ ಡಿ’ಸೋಜ, ಬಿಲ್ಲವ ಸಮಜದ ಮುಖಂಡ ಮಾಧವ ಸುವರ್ಣ, ಶಾಂತಲಾ ಗಟ್ಟಿ, ಮಂಗಳೂರು ತಾಲೂಕು ಬಿಲ್ಲವ ಸಂಘದ ಜಿತೇಂದ್ರ ಸುವರ್ಣ, ಯುವವಾಹಿನಿಯ ಹರೀಶ್, ಜಗನ್ನಾಥ್ ಬಂಗೇರಾ, ದಯಾನಂದ ಪೂಜಾರಿ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ದಸರಾ ಕ್ರೀಡೋತ್ಸವದಲ್ಲಿ ಹೈಸ್ಕೂಲ್ ವಿಭಾಗ, ಸೀನಿಯರ್ ವಿಭಾಗದಲ್ಲಿ ನಾನಾ ಅಥ್ಲೆಟಿಕ್ಸ್ ಜತೆಗೆ ಕಬಡ್ಡಿ, ಹಗ್ಗಜಗ್ಗಾಟ ನಡೆಯಿತು.