ಬಿಜೆಪಿಗೆ ಒಂದೂವರೆ ಕೋಟಿಗೂ ಹೆಚ್ಚ ಸದಸ್ಯತ್ವ: ಧೀರಜ್ ಮುನಿರಾಜು
ಮಂಗಳೂರು: ರಾಜ್ಯದಲ್ಲಿ ಈ ತಿಂಗಳೊಳಗೆ ಒಂದೂವರೆ ಕೋಟಿಗೂ ಹೆಚ್ಚು ಮಂದಿಯನ್ನು ಬಿಜೆಪಿ ಸದಸ್ಯರನ್ನಾಗಿಸುವ ನಿಟ್ಟಿನಲ್ಲಿ ಅಭಿಯಾನ ಸಾಗುತ್ತಿದೆ. ಪ್ರತಿ ಮನೆಯಿಂದಲೂ ಓರ್ವ ಬಿಜೆಪಿ ಕಾರ್ಯಕರ್ತರನ್ನು ಹೊಂದುವುದು ಪಕ್ಷದ ಉದ್ದೇಶವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನಕ್ಕಾಗಿ ಆಗಮಿಸಿರುವ ಅವರು ಕುಲಶೇಖರದಲ್ಲಿ ಶುಕ್ರವಾರ ಜರಗಿದ ಅಭಿಯಾನದ ಸಂದರ್ಭದಲ್ಲಿ ಪಾಲ್ಗೊಂಡು ಪತ್ರಕರ್ತರೊಂದಿಗೆ ಮಾತನಾಡಿದರು. ದೇಶದಲ್ಲಿ ಸದಸ್ಯತ್ವ ಅಭಿಯಾನದಡಿ 9 ಕೋಟಿ ಮಂದಿ ಈಗಾಗಲೇ ಸದಸ್ಯತ್ವ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ 50 ಲಕ್ಷ ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಬಿಜೆಪಿಯ ಆಂತರಿಕ ಸಂವಿಧಾನದಂತೆ ಪ್ರತಿ 6 ವರ್ಷಕ್ಕೊಮ್ಮೆ ಸದಸ್ಯತ್ವವನ್ನು ಪಡೆಯಲಾಗುತ್ತದೆ. ಅದರಂತೆ ಅಭಿಯಾನ ನಡೆಯುತ್ತಿದ್ದು, ದ.ಕ. ಜಿಲ್ಲೆಯಲ್ಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ನಿಗದಿತ ಗುರಿಗಿಂತ ಎರಡುಪಟ್ಟು ಹೆಚ್ಚು ಮಂದಿಯನ್ನು ಸದಸ್ಯರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ವಿಕಸಿತ ಭಾರತಕ್ಕಾಗಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ನಮ್ಮ ದೇಶವನ್ನು ಜಗತ್ತು ತಿರುಗಿ ನೋಡುವಂತಾಗಿದೆ. ಹಿಂದೆ ಯಾವತ್ತೂ ಸಿಗದ ಗೌರವ ಭಾರತಕ್ಕೆ ಇಂದು ಸಿಗುತ್ತಿದೆ. 2047ಕ್ಕೆ ಸ್ವಾತಂತ್ರ್ಯೋತ್ಸವದ ನೂರನೇ ವರ್ಷ ಆಚರಣೆ ಸಂದರ್ಭದಲ್ಲಿ ವಿಕಸಿತ ಭಾರತವನ್ನಾಗಿ ಮಾಡುವುದು ನರೇಂದ್ರ ಮೋದಿಯವರ ಗುರಿಯಾಗಿದೆ. ಅದಕ್ಕೆ ಪೂರಕವಾಗಿ ಮತದಾರರು, ನಾಗರಿಕರ ಸದಸ್ಯತ್ವ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಅಶ್ವಿತ್ ಕೊಟ್ಟಾರಿ, ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಮೌನೇಶ್ ಚೌಟ, ಋತ್ವಿಕ್ ಕದ್ರಿ, ಕಿಶೋರ್ ಕೊಟ್ಟಾರಿ, ಕಾವ್ಯಾ ನಟರಾಜ್, ರೂಪಶ್ರೀ ಪೂಜಾರಿ ಉಪಸ್ಥಿತರಿದ್ದರು.