ದಸರಾ ವಿಶೇಷ ಪ್ಯಾಕೇಜ್ ಪ್ರವಾಸ: ನಿರೀಕ್ಷೆಗೂ ಮೀರಿ ಜನಸ್ಪಂದನ
ಮಂಗಳೂರು: ದಸರಾ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ಆಯೋಜಿಸಿರುವ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ನಿರೀಕ್ಷೆಗೂ ಮೀರಿ ಜನಸ್ಪಂದನ ವ್ಯಕ್ತವಾಗುತ್ತಿದೆ. ಭಾನುವಾರ ಒಂದೇ ದಿನ 1,119 ಮಂದಿ ಪ್ರವಾಸಿಗರು ಧಾರ್ಮಿಕ ಕ್ಷೇತ್ರಗಳ ಭೇಟಿ ಕೈಗೊಂಡಿದ್ದು, ಮಂಗಳೂರು ವಿಭಾಗದ ಮಟ್ಟಿಗೆ ಇದು ದಾಖಲೆಯಾಗಿದೆ. ಈ ಮೂಲಕ ಕೆಎಸ್ಆರ್ಟಿಸಿ ಮಂಗಳೂರು ವಿಭಾಗ ದಸರಾ ದರ್ಶಿನಿ ಮೂಲಕ ಒಂದೇ ದಿನ 5 ಲಕ್ಷ ರೂ.ಗೂ ಅಧಿಕ ಆದಾಯ ಗಳಿಸಿದೆ.
2022ರಿಂದ ಕೆಎಸ್ಆರ್ಟಿಸಿ ಪ್ರತಿವರ್ಷ ದಸರಾ ದರ್ಶಿನಿಯನ್ನು ಆಯೋಜಿಸುತ್ತಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪಂದನ ಸಿಗುತ್ತಿರುವುದು ಗಮನಾರ್ಹ. ಭಾನುವಾರ ಒಂದೇ ದಿನ 24 ಬಸ್ಗಳು ಓಡಾಟ ನಡೆಸಿದ್ದು, 1,119 ಮಂದಿ ವಿವಿಧ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದಾರೆ. 2022ರಲ್ಲಿ ಒಂದೇ ದಿನ 22 ಬಸ್ಗಳು ಓಡಾಟ ನಡೆಸಿರುವುದು ಇದುವರೆಗಿನ ದಾಖಲೆಯಾಗಿತ್ತು.
ಎಲ್ಲಿಗೆ, ಎಷ್ಟು ಬಸ್? ಎಷ್ಟು ಪ್ರಯಾಣಿಕರು?:
ಮಂಗಳೂರು-ಮಡಿಕೇರಿಗೆ 7 ಬಸ್ಗಳನ್ನು ಓಡಿಸಲಾಗಿದ್ದು, 350 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮಂಗಳೂರು-ಕೊಲ್ಲೂರು ನಡುವೆ 8 ಬಸ್ಗಳಲ್ಲಿ 400 ಪ್ರಯಾಣಿಕರು ಪ್ರವಾಸ ಕೈಗೊಂಡಿದ್ದರು. ಮಂಗಳೂರು-ಮುರ್ಡೇಶ್ವರ ನಡುವೆ 3 ಬಸ್ಗಳನ್ನು ಗೊತ್ತುಪಡಿಸಲಾಗಿದ್ದು, 150 ಪ್ರಯಾಣಿಕರಿದ್ದರು. ಮಂಗಳೂರು ವ್ಯಾಪ್ತಿಯ ದೇವಾಲಯಗಳಿಗಾಗಿ ನಿಗದಿಪಡಿಸಿದ್ದ ಮಂಗಳೂರು ನವದುರ್ಗಾ ಪ್ಯಾಕೇಜ್ನಲ್ಲಿ 4 ಬಸ್ಗಳಲ್ಲಿ 120 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಉಡುಪಿ - ಕೊಲ್ಲೂರು ನಡುವೆ 1 ಬಸ್ನಲ್ಲಿ 46 ಮಂದಿ ಪ್ರಯಾಣಿಸಿದ್ದಾರೆ. ಉಡುಪಿ-ಇಡಗುಂಜಿ ಟೂರ್ನಲ್ಲಿ 1 ಬಸ್ನಲ್ಲಿ 53 ಮಂದಿ ಪ್ರಯಾಣಿಸಿದ್ದಾರೆ.
ಅ.3 ರಿಂದ ಅ.6ರವರೆಗೆ ದಸರಾ ದರ್ಶಿನಿಯ ವಿವಿಧ ಪ್ಯಾಕೇಜ್ನಲ್ಲಿ ಒಟ್ಟು 2,636 ಮಂದಿ ಧಾರ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಅ.12 ರ ವರೆಗೆ ಈ ದಸರಾ ದರ್ಶಿನಿ ಇರಲಿದೆ. ನಂತರವೂ ಪ್ರವಾಸಿಗರು ಆಸಕ್ತಿ ತೋರಿದಲ್ಲಿ ಇದನ್ನು ಇನ್ನೂ ಒಂದಷ್ಟು ದಿನ ವಿಸ್ತರಿಸಲಾಗುವುದು. ಮಂಗಳೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದರು.