ಕಂಬಳವನ್ನು ಮಾದರಿಯಾಗಿಟ್ಟುಕೊಂಡು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲು ಡಾ.ಆಳ್ವ ಸಲಹೆ
ಮೂಡುಬಿದಿರೆ: ಅವಿಭಜಿತ ಜಿಲ್ಲೆಯಲ್ಲಿ ಕಂಬಳ ಕ್ರೀಡೆಯನ್ನು ಅಸೋಸಿಯೇಶನ್ನವರು ಸುಂದರವಾಗಿ ಕಟ್ಟಿಕೊಂಡು ಬಂದು ವರ್ಷಕ್ಕೆ 30 ಕಂಬಳಕ್ಕೆ ವೇಳಾಪಟ್ಟಿಯನ್ನು ತಯಾರಿಸಿ ವೈಭವೀಕರಣದಿಂದ 24 ರಿಂದ 36 ಗಂಟೆಗಳ ಕಾಲ ನಡೆಸಿಕೊಂಡು ಬರುತ್ತಿದ್ದಾರೆ ಆದರೆ ಶಾಲಾ ಕಾಲೇಜುಗಳ ಕ್ರೀಡಾಕೂಟವನ್ನು ನಡೆಸಲು ಸರಿಯಾದ ವೇಳಾಪಟ್ಟಿಯನ್ನು ತಯಾರಿಸಿ ಮರ್ಯಾದೆಯಿಂದ ಕ್ರೀಡಾಕೂಟವನ್ನು ನಡೆಸುವ ಯೋಗ್ಯತೆ ಅಸೋಸಿಯೇಶನ್ಗೆ ಇಲ್ಲ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ವಿಷಾಧ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ವಿದ್ಯಾಗಿರಿಯ ಅಪ್ಪಾಜಿ ನಾಯ್ಕ್ ಸಭಾಂಗಣದಲ್ಲಿ ಕೀರ್ತಿಶೇಷ ಲೋಕನಾಥ ಬೋಳಾರ ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕೇಂದ್ರ, ರಾಜ್ಯ ಹಾಗೂ ರಾಜಕರಣಿಗಳನ್ನು ಬಿಟ್ಟುಬಿಡಿ ಅವರು ರಾಜಕರಣ ಮಾಡುವವರು ಆದರೆ ಅಸೋಸಿಯೇಶನ್ ನಲ್ಲಿರುವ ಕೂಡಾ ರಾಜಕೀಯ ಮಾಡೋದ್ಯಾಕೆ ರಾಜಕರಣ ಮಾಡುವುದಾದರೆ ಅವರು ಯಾವುದಾದರೊಂದು ಪಕ್ಷದಲ್ಲಿ ಸೇರಿಕೊಳ್ಳುವುದು ಉತ್ತಮವಲ್ಲವೇ ಎಂದ ಅವರು ನಾವು ಈ ಹಿಂದೆ ಬಾಡಿ ಬಿಲ್ಡಿಂಗ್ ಕ್ರೀಡೆಯನ್ನು ಆಯೋಜಿಸಿದ್ದೆವು ಆದರೆ ಮತ್ತೆ ಆಯೋಜಿಸುವ ಅವಕಾಶ ಸಿಕ್ಕಿಲ್ಲ ಇಂತಹ ಪರಿಸ್ಥಿತಿಯಾದರೆ ಕ್ರೀಡಾಪಟುಗಳ ಗತಿಯೇನು ಎಂದು ಪ್ರಶ್ನಿಸಿದ ಅವರು ಮಕ್ಕಳಿಗಾಗಿ ಆಯೋಜಿಸುವ ಕ್ರೀಡೆಯಲ್ಲಿ ಇಂತಹ ಪರಿಸ್ಥಿತಿ ಇದೆ ಎಂದು ಮೊದಲೇ ಗೊತ್ತಿದ್ದರೆ ತಾನು ಕೂಡಾ ತನ್ನಪ್ಪನಂತೆಯೇ ಕೋಣಗಳನ್ನು ಸಾಕಿ ಜಾನಪದ ಕ್ರೀಡೆಯಾಗಿರುವ ಕಂಬಳವನ್ನೇ ಆಯೋಜಿಸಿ ಕೋಣಗಳನ್ನು ಓಡಿಸುತ್ತಿದ್ದೆ ಎಂದು ಕೋಪದಿಂದ ಬೇಸರ ವ್ಯಕ್ತಪಡಿಸಿದ ಅವರು ರಾಜಕೀಯ ಬಿಟ್ಟು ಕೊಡು ಕೊಳ್ಳುವ ಪ್ರಯೋಗಗಳನ್ನು ಮಾಡಿಕೊಂಡು ಬಂದು ಕಂಬಳ ಕ್ರೀಡೆಯನ್ನು ಮಾದರಿಯಾಗಿ ತೆಗೆದುಕೊಂಡು ಆಯೋಜಿಸಿದರೆ ಎಲ್ಲವೂ ಸಾಧ್ಯ ಎಂದು ಸಲಹೆ ನೀಡಿದರು.