ಮೂಡುಬಿದಿರೆಗೆ ಆಗಮಿಸಿದ ಸುವರ್ಣ ಕರ್ನಾಟಕ ರಥಯಾತ್ರೆಗೆ ಸ್ವಾಗತ
ಮೂಡುಬಿದಿರೆ: ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ನೆಲ, ಜಲವನ್ನು ಉಳಿಸಿಕೊಂಡು ಬರಬೇಕಾದ ಹೊಣೆಗಾರಿಕೆ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ. ಸರಕಾರದ ಆಶಯದಂತೆ ನಾವೆಲ್ಲರೂ ನಾಡುನುಡಿ ಪ್ರೀತಿಯ ಜೊತೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರಮಿಸಬೇಕಾಗಿದೆ ಎಂಬುದಾಗಿ ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹೇಳಿದರು.
ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷಗಳು ತುಂಬಿದ ಸುವರ್ಣ ಸಂಭ್ರಮದ ಸಂದರ್ಭದ ಸಲುವಾಗಿ ‘ಕನ್ನಡ ಜ್ಯೋತಿ ರಥಯಾತ್ರೆ’ಯನ್ನು ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಬಳಿ ಸ್ವಾಗತಿಸಿ ಮಾತಾನಾಡಿದರು. ರಥಕ್ಕೆ ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರು, ಕ.ಸಾ.ಪ ಹೋಬಳಿ ಘಟಕದ ಅಧ್ಯಕ್ಷರು ಮತ್ತಿತರ ಆಡಳಿತ ವರ್ಗದವರು ಮಾಲಾರ್ಪಣೆ ನೆರವೇರಿಸಿದರು.
ಕಂದಾಯ ನಿರೀಕ್ಷಕರಾದ ಮಂಜುನಾಥ ಹಾಗೂ ಆಡಳಿತ ಸೌಧದ ಅಧಿಕಾರಿಗಳು, ನೌಕರ ವೃಂದ, ಕ್ಷೇತ್ರ ಶಿಕ್ಷಣಾಧಿಕಾರಿ, ಕ.ಸಾ.ಪ.ದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ, ಕಾರ್ಯದರ್ಶಿ ಸದಾನಂದ ನಾರಾವಿ, ಸಂಘಟನಾ ಕಾರ್ಯದರ್ಶಿ ಯತಿರಾಜ ಶೆಟ್ಟಿ, ಹೋಬಳಿ ಅಧ್ಯಕ್ಷ ರಾಮಕೃಷ್ಣ ಶಿರೂರು, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಮಂಗಳೂರಿನಿಂದ ಮೂಡುಬಿದಿರೆಗೆ ಆಗಮಿಸಿದ ರಥಯಾತ್ರೆಯನ್ನು ಮೂಡುಬಿದಿರೆ ಗಡಿಭಾಗದ ಮಿಜಾರಿನ ಬಳಿ ಹಾರ್ದಿಕವಾಗಿ ಬರಮಾಡಿಕೊಳ್ಳಲಾಯಿತು. ಮಂಗಳೂರು ತಾಲೂಕು ಕ.ಸಾ.ಪ. ಅಧ್ಯಕ್ಷ ಮಂಜುನಾಥ ರೇವಣ್ಕರ್, ಸಂಘಟನಾ ಸಹಕಾರ್ಯದರ್ಶಿಗಳಾದ ಸನತ್ಕುಮಾರ್ ಜೈನ್ ಹಾಗೂ ಅಧಿಕಾರಿ ವರ್ಗದವರು ರಥಯಾತ್ರೆಯ ಮುಂದಿನ ಹೊಣೆಗಾರಿಕೆಯನ್ನು ಮೂಡುಬಿದಿರೆ ಕಂದಾಯ ನಿರೀಕ್ಷಕರಾದ ಮಂಜುನಾಥ ಮತ್ತು ಮೂಡುಬಿದಿರೆ ತಾಲೂಕು ಕ.ಸಾ.ಪ. ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಅವರಿಗೆ ಒಪ್ಪಿಸಿದರು.
ಈ ಸಂದರ್ಭದಲ್ಲಿ ಇತರ ಅಧಿಕಾರಿ ವರ್ಗ ಹಾಗೂ ಮೂಡುಬಿದಿರೆ ತಾಲೂಕು ಘಟಕದ ಕಾರ್ಯದರ್ಶಿ, ಸಂಚಾಲಕರು ಹಾಜರಿದ್ದು ರಥಯಾತ್ರೆಯನ್ನು ಬರಮಾಡಿಕೊಂಡರು. ಅಲ್ಲಿಂದ ಮೂಡುಬಿದಿರೆ ತಾಲೂಕು ಆಡಳಿತ ಸೌಧದ ತನಕ ಮೂಡುಬಿದಿರೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ನೆಲೆನಿಂತಿದ್ದು ಮಾರನೆಯ ದಿನ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಬೀಳ್ಕೊಡಲಾಯಿತು.
