ಪತ್ರಕರ್ತರಾದ ವೇಣುಗೋಪಾಲ್, ಶೇಖರ ಅಜೆಕಾರು ಸಂಸ್ಮರಣೆ: ನಾಳೆ ಮೂಡುಬಿದಿರೆಯಲ್ಲಿ ಬಹುಭಾಷಾ ಕವಿಗೋಷ್ಟಿ
ಮೂಡುಬಿದಿರೆ: ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಿಧನರಾಗಿರುವ ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ-ಪ್ರೆಸ್ಕ್ಲಬ್ ಇದರ ಮಾಜಿ ಅಧ್ಯಕ್ಷ, ವಕೀಲರಾಗಿದ್ದ ವೇಣುಗೋಪಾಲ್ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪತ್ರಕರ್ತರಾಗಿದ್ದ, ಬಹುಮುಖ ಪ್ರತಿಭೆ ಶೇಖರ ಅಜೆಕಾರು ಇವರ ಸಂಸ್ಮರಣ ಕಾರ್ಯಕ್ರಮವು ನಾಳೆ (ಅ.26) ಅಪರಾಹ್ನ 3 ಗಂಟೆಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜರಗಲಿದೆ ಎಂದು ಮೂಡುಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜ ಮಂದಿರ ಸಭಾದ ಸಹಕಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರೆಸ್ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ವಕೀಲ ಎಂ. ಬಾಹುಬಲಿ ಪ್ರಸಾದ್ ಅವರು ವೇಣುಗೋಪಾಲ್ ಸಂಸ್ಮರಣೆ ನಡೆಸಿಕೊಡಲಿದ್ದಾರೆ. ಪತ್ರಕರ್ತ ರವೀಂದ್ರ ಶೆಟ್ಟಿ ಮಂಗಳೂರು ಇವರು ‘ಮಾಧ್ಯಮ ಮತ್ತು ವಿಶ್ವಾಸಾರ್ಹತೆ’ ಕುರಿತು ಮಾತನಾಡಲಿದ್ದಾರೆ.
ಶೇಖರ ಅಜೆಕಾರು ಅವರ ಸಂಸ್ಮರಣೆಯನ್ನು ಧನಂಜಯ ಮೂಡುಬಿದಿರೆ ನಡೆಸಿಕೊಡಲಿದ್ದಾರೆ. ನಂತರ ಸಾಹಿತಿ ಸದಾನಂದ ನಾರಾವಿ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಟಿ ನಡೆಯಲಿದೆ.
ಕವಿಗಳಾದ ಡಾ. ಸುರೇಶ ನೆಗಳಗುಳಿ, ಸೌಮ್ಯ ಕುಗ್ವೆ (ಹವ್ಯಕ ಕನ್ನಡ), ಹಸನಬ್ಬ (ಬ್ಯಾರಿ), ವನಜಾ ಜೋಶಿ, ಉಜಿರೆ (ಚಿತ್ಪಾವನಿ), ಸದಾನಂದ ನಾರಾವಿ, ಪದ್ಮನಾಭ ಮಿಜಾರು (ತುಳು), ರೇಮಂಡ್ ಡಿಕ್ಹುನ್ನಾ ತಾಕೊಡೆ, ಹೆರಾಲ್ಡ್ ತಾವ್ರೋ, ಮುಕುಂದ ಕಾಮತ್ ಮಿಜಾರು (ಕೊಂಕಣಿ), ಲಿಂಗಪ್ಪ ಗೌಡ ನೀರ್ಕೆರೆ (ಕುಡುಬಿ ಕೊಂಕಣಿ), ಅನಿತಾ ಶೆಟ್ಟಿ ಮೂಡುಬಿದಿರೆ, ನಾಗಶ್ರೀ ಎಸ್. ಭಂಡಾರಿ, ರಾಮಕೃಷ್ಣ ಶೀರೂರು, ಮಾನಸ ಪ್ರವೀಣ್, ಶರಣ್ಯಾ ಬೆಳುವಾಯಿ (ಕನ್ನಡ) ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.